ಕುಂಜೂರು ಶ್ರೀ ದುರ್ಗಾ ಮಿತ್ರವೃಂದ 17ನೇ ವಾರ್ಷಿಕ ಭಜನಾ ಮಂಗಲೋತ್ಸವ ಉದ್ಘಾಟನೆ

ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿಯ ಸಂದರ್ಭ ಶ್ರೀ ದುರ್ಗಾ ಮಿತ್ರ ವೃಂದದ ನೇತೃತ್ವದಲ್ಲಿ ಆಹ್ವಾನಿತ ತಂಡಗಳ ಭಜನಾ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ಹದಿನೇಳನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.

ಅವರು ಈ ಸಂದರ್ಭ ತಮ್ಮ ಆಶೀರ್ವಚನದಲ್ಲಿ, ಕಲಿಯುಗದಲ್ಲಿ ಭಜನೆಗೆ ವಿಶೇಷ ಶಕ್ತಿ ಮತ್ತು ಮಹತ್ವವಿದೆ. ಮನೆ ಮನೆಗಳಲ್ಲಿ ನಿತ್ಯ ಭಜನೆ ಮಾಡುವುದರಿಂದ ಧ್ಯಾನದ ಜೊತೆಗೆ ಸಂಘಟಿತ ಬದುಕು ನಡೆಸಲು ಸಾಧ್ಯವಾಗುತ್ತದೆ. ಶ್ರೀ ದುರ್ಗಾಮಿತ್ರವೃಂದದ ಸದಸ್ಯರು ಮನೆಮನೆಗೆ ತೆರಳಿ ನಡೆಸುವ ಭಜನೆ, ಅದರ ಜತೆಗೆ ವರ್ಷಕ್ಕೊಮ್ಮೆ ನಡೆಸುವ ಮಂಗಳೋತ್ಸವದ ಮೂಲಕ ಸಮಾಜದ ಜನರಿಗೆ ಶ್ರೀ ದುರ್ಗೆಯ ಪೂರ್ಣಾನುಗ್ರಹವನ್ನು ತಲುಪಿಸಲು ಕಾರಣರಾಗುತ್ತಿದ್ದಾರೆ ಎಂದರು.

ಶ್ರೀ ದುರ್ಗಾ ದೇವಸ್ಥಾನದ ಪವಿತ್ರಪಾಣಿ ಕೆ. ಎಲ್. ಕುಂಡಂತಾಯ, ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್, ಪ್ರಧಾನ ಅರ್ಚಕ ವೇ. ಮೂ. ಹರಿಕೃಷ್ಣ ಉಡುಪ, ಅರ್ಚಕರಾದ ವೇ. ಮೂ. ಚಕ್ರಪಾಣಿ ಉಡುಪ, ವೇ. ಮೂ. ರಘುಪತಿ ಉಡುಪ, ಮೊಕ್ತೇಸರರಾದ ಸತೀಶ್ ಕುಂಡಂತಾಯ, ಸಂತೋಷ್ ಬಿ. ಶೆಟ್ಟಿ, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಉದ್ಯಮಿ ದಿನೇಶ್ ಕುಂಜೂರು, ರಾಮಚಂದ್ರ ಭಟ್ ಎಲ್ಲೂರು, ಅನಂತರಾಮ ರಾವ್, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಕೋಶಾಧಿಕಾರಿ ರಾಕೇಶ್ ಕುಂಜೂರು, ಭಜನಾ ಕಾರ್ಯದರ್ಶಿ ಪ್ರಸಾದ್ ಆಚಾರ್ಯ, ಮಹಿಳಾ ಬಳಗದ ಸಂಚಾಲಕಿ ಜ್ಯೋತಿ ಯು., ಮಾಜಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸುನೀಲ್ ಎಸ್.ಎಂ., ಪದಾಧಿಕಾರಿಗಳಾದ ಚರಣ್ ದೇವಾಡಿಗ, ಧನುಷ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮ ಸೀಮೆಯ ಭಗವದ್ಭಕ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು