Header Ads Widget

ಜನಿವಾರ, ಮಾಂಗಲ್ಯ ತೆಗೆಯುವ ಆದೇಶ ವಾಪಾಸ್: ರೈಲ್ವೇ ಸಚಿವಾಲಯ ಅಧಿಕೃತ ಆದೇಶ

ರೈಲ್ವೆ ನೇಮಕಾತಿ ಪರೀಕ್ಷೆಯ ವೇಳೆಯಲ್ಲಿ ಜನಿವಾರ, ಮಾಂಗಲ್ಯ, ಬಳೆ ತೆಗೆಯುವಂತ ಆದೇಶವನ್ನು ಇಲಾಖೆ ವಾಪಾಸ್ ಪಡೆದಿದೆ. ನಾಳೆಯಿಂದ ರೈಲ್ವೇ ಇಲಾಖೆಯ ಪರೀಕ್ಷೆ ನಡೆಯುತ್ತಿದ್ದು, ಅನೇಕ ವರ್ಷಗಳಿಂದ ಇದ್ದ ನಿಬಂಧನೆಗಳನ್ನು ವಾಪಸ್ ಪಡೆಯಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.


ರೈಲ್ವೇ ಇಲಾಖೆ ಪರೀಕ್ಷೆಗೆ ಜನಿವಾರ, ಮಂಗಳಸೂತ್ರ ನಿರ್ಬಂಧ ಆದೇಶ ವಾಪಾಸ್ ಪಡೆದು ರೈಲ್ವೇ ಸಚಿವಾಲಯ ಅಧಿಕೃತ ಆದೇಶ ನೀಡಿದೆ. ರೈಲ್ವೇ ಸಚಿವಾಲಯ ದೇಶದ ಎಲ್ಲಾ ರೈಲ್ವೇ ನೇಮಕಾತಿ ಮಂಡಳಿಗಳಿಗೆ ಈ ಬಗ್ಗೆ ಸೂಚನೆ ನೀಡಿದೆ. ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ತಿದ್ದುಪಡಿ ಮಾಡಿ ರೈಲ್ವೇ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.


ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕಾಲ್ ಲೆಟರ್‌ನಲ್ಲಿ ಇರುವ ಪ್ಯಾರಾ 7ರ ಸೂಚನೆಗಳ ತಿದ್ದುಪಡಿ ಮಾಡಲಾಗಿದೆ. ಹೊಸ ಆದೇಶದ ಅನ್ವಯ ಲೋಹದ ಆಭರಣಗಳು, ಧಾರ್ಮಿಕ ಚಿಹ್ನೆ ಗಳು, ಆಭರಣಗಳು, ಮಂಗಳಸೂತ್ರ, ಬ್ರೇಸ್‌ಲೆಟ್ ಧರಿಸಲು ಅನುಮತಿ ನೀಡಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಅಂತಹ ಅಭ್ಯರ್ಥಿಗಳ ಮೇಲೆ ಹೆಚ್ಚು ಜಾಗರೂಕತೆ ವಹಿಸಲು ಸೂಚನೆ ನೀಡ ಲಾಗಿದೆ.

ನಾಳೆಯಿಂದಲೇ ಈ ನಿಯಮ ಅನ್ವಯ: ಕೇಂದ್ರ ಸಚಿವ ವಿ. ಸೋಮಣ್ಣ
ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಮಾಂಗಲ್ಯ, ಜನಿವಾರ ತೆಗಿಯಬೇಕು ಎಂಬ ಆದೇಶ ಬದಲಿಸಲಾಗಿದೆ. ಇನ್ಮುಂದೆ ಮಾಂಗಲ್ಯ, ಜನಿವಾರ ತೆಗೆಯುವಂತಿಲ್ಲ. ಈ ಹಿಂದೆ‌ ಇದ್ದ ಆದೇಶ ವಾಪಸ್ ಪಡೆಯಲಾಗಿದೆ. ದೇಶಾದ್ಯಂತ ನಾಳೆಯಿಂದಲೇ ಈ ನಿಯಮ ಅನ್ವಯವಾಗಲಿದೆ ಎಂದರು.


ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಇಂದು ಸುದೀರ್ಘವಾದ ಸಭೆ ನಡೆಸಿದ್ದೇವೆ. ಅನೇಕ ವರ್ಷಗಳಿಂದ ಪರೀಕ್ಷೆ ಬರೆಯಲು ಈ ನಿಬಂಧನೆಗಳು ಇದ್ದವು. ಜನಿವಾರ ತೆಗೆಯದಂತೆ ಇಂದೇ ಆದೇಶ ಆಗಬೇಕು ಎಂದು ಮನವಿ ಮಾಡಿದೆ. 


ಹೀಗಾಗಿ ಸುಮಾರು ವರ್ಷದಿಂದ ಇದ್ದ ಕಟ್ಟು ಪಾಡುಗಳನ್ನು ತೆಗದುಹಾಕಲಾಗಿದೆ. ಮಾಂಗಲ್ಯ, ಜನಿವಾರ ತೆಗೆಯುವಂತಿಲ್ಲ ಎಂದು ರೈಲ್ವೇ ಇಲಾಖೆಯಿಂದ ಆದೇಶ ಆಗಿದೆ. ಅಭ್ಯರ್ಥಿಗಳಿಗೆ ಇದ್ದ ಗೊಂದಲ ನಿವಾರಣೆ ಆಗಿದ್ದು, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.