Header Ads Widget

​ರಾಜ್ಯಸಭಾಪತಿಯಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿಗೆೆ ಸಾರ್ವಜನಿಕ ಅಭಿನಂದನೆ

ಉಡುಪಿ,; ಅಂತ​ರಾಷ್ಟ್ರೀಯ  ಸೇವಾ ಸಂಸ್ಥೆಯಾದ ಭಾರತೀಯ ರೆಡ್‌ಕ್ರಾಸ್ಸಿನ ಅಂಗಸ​೦ಸ್ಥೆಯಾದ ಕರ್ನಾಟಕ ರೆಡ್‌ಕ್ರಾಸ್ಸಿನ ಸಭಾಪತಿಗಳಾಗಿ ಮೂರನೇ ಬಾರಿ ಆಯ್ಕೆಯಾಗಿರುವ ಮೂಲಕ ಬಸ್ರೂರು ರಾಜೀವ ಶೆಟ್ಟಿಯವರು ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದು ನಾವೆಲ್ಲರೂ ಹೆಮ್ಮೆ ಪಡುವ ಸಾಧನೆಯಾಗಿದೆ ಎಂದು ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.



ಅವರು ಇಂದು ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಸಾರ್ವಜನಿಕ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ರೆಡ್‌ಕ್ರಾಸ್ ಸಭಾಪತಿಗಳಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿಯವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಮಾತಾನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ರಾಜೀವ ಶೆಟ್ಟಿಯವರು ಸೇವಾಕಾರ್ಯಗಳ ಮೂಲಕ ಉಡುಪಿ
ರೆಡ್‌ಕ್ರಾಸ್‌ನ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರು.


ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಶುಭ ಹಾರೈಸಿದರು. ಮಾಜಿ ಜಿಲ್ಲಾ ಗವರ್ನರ್ ವಿ.ಜಿ. ಶೆಟ್ಟಿಯವರು ಅಭಿನಂದನಾ ಭಾಷಣ ಮಾಡಿದರು.​ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ವಿಜಯ ಬಲ್ಲಾಳ್, ಉಡುಪಿ ಜಿಲ್ಲೆ ಸ್ಕೌಟ್ ಮತ್ತ್ತು ಗೈಡ್ ಸಂಸ್ಥೆಯ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ, ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಮಂಗಳೂರು
ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್ ಸಂಯೋಜಕಿ ಡಾ. ಗಾಯತ್ರಿ, ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಶಾಂತರಾಮ್ ಶೆಟ್ಟಿ, ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಲೂಯಿಸ್ ಲೋಬೋ, ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈಜಿ., ಮಾಜಿ ಖಜಾಂಚಿ ಟಿ. ಚಂದ್ರಶೇಖರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



ಖ್ಯಾತ ಕಲಾವಿದ ಶಂಕರ್‌ದಾಸ್ ಚಂಡ್ಕಳ ನಾಡಗೀತೆಯನ್ನು ಹಾಡಿದರು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಮಾಜಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಸೇರಿಗಾರ ಕಾರ್ಯಕ್ರಮ ನಿರ್ವಹಿಸಿದರು. ರೆಡ್‌ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.