ಉಡುಪಿ: ಮಕ್ಕಳು ಮಾನಸಿಕವಾಗಿ ಸದೃಢರಾದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ತಿಳಿಸಿದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶನಿವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಹಮ್ಮಿಕೊಂಡ ಮಕ್ಕಳ ರಂಗಶಿಬಿರ ‘ಕೊಂಡಾಟ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಮನೆಗೆ ಸೀಮಿತರಾಗಿ ಬಿಡುತ್ತಿದ್ದಾರೆ. ಮೊಬೈಲ್ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ಮಕ್ಕಳು ಮಾನಸಿಕವಾಗಿ ಬಲಿಷ್ಠಗೊಳ್ಳಬೇಕಾದರೆ, ಸಮಾಜದೊಂದಿಗೆ ಹೊಂದಿಕೊಳ್ಳಬೇಕಾದರೆ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದ್ದರೆ ಇಂಥ ಶಿಬಿರಗಳು ಅಗತ್ಯ ಎಂದು ಪ್ರತಿಪಾದಿಸಿದರು.
ಸುಮನಸಾ ಕೊಡವೂರು ಸಂಸ್ಥೆಯು ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವ, ಸಮಾಜ ನಿರ್ಮಾಣದ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
‘ನಾನು 30–35 ವರ್ಷಗಳಿಂದ ಬೇರೆ ಬೇರೆ ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ನಾನು ದಕ್ಷಿಣ ಕನ್ನಡ ಹಾಲು ಉತ್ಪಾದಕ ಒಕ್ಕೂಟದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಸುಮಾರು 15 ವರ್ಷಗಳ ಹಿಂದೆ ನಾನು ಮೊದಲ ಬಾರಿ ಒಕ್ಕೂಟದ ಅಧ್ಯಕ್ಷನಾಗಿ ಆಯ್ಕೆಯಾದಾಗ ಹಾಲು ಉತ್ಪಾದನೆಯ ಪ್ರಮಾಣವೂ ಬಹಳ ಕಡಿಮೆ ಇತ್ತು. ಅಂಥ ಸಮಯದಲ್ಲಿ ನಾನು ಮಾಡಿದ ಕೆಲಸ ಸಂತೃಪ್ತಿಯನ್ನು ನೀಡಿತ್ತು. ಆನಂತರ ಅನೇಕ ಬದಲಾವಣೆಗಳಾದವು. ಮತ್ತೆ ಅಧ್ಯಕ್ಷನಾದೆ. ಬೇರೆ ಬೇರೆ ಕಾರಣಗಳಿಂದ ಒಂದು ಹಂತದಲ್ಲಿ ರಾಜೀನಾಮೆ ನೀಡಿ ಹೊರಬಂದೆ. ಮತ್ತೆ ಸ್ಪರ್ಧೆ ಮಾಡಬೇಕು ಎಂದು ಬಯಕೆ ಇರಲಿಲ್ಲ. ಆದರೆ ದೈವಿಚ್ಛೆ ಬೇರೆ ಇತ್ತು. ಸ್ಪರ್ಧೆ ಮಾಡಿ ಮತ್ತೆ ಅಧ್ಯಕ್ಷನಾಗಿದ್ದೇನೆ’ ಎಂದು ವಿವರಿಸಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣಕ್ಕೆ ರವಿರಾಜ ಹೆಗ್ಡೆಯವರನ್ನು ಸುಮನಸಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಪತ್ರಕರ್ತ ನಾಗರಾಜ್ ವರ್ಕಾಡಿ ಅವರು ಮಾತನಾಡಿ ಮಕ್ಕಳು ಮೊಬೈಲ್ ಮತ್ತು ಇತರ ವಿಚಾರಗಳ ಏಕತಾನತೆಯಿಂದ ಹೊರಬರಲು ಮತ್ತು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಇಂತಹ ಶಿಬಿರಗಳು ಸಹಕಾರಿ ಮತ್ತು. ಶಿಬಿರಕ್ಕೆ ಸೇರಿದ ಮಕ್ಕಳು ಉತ್ತಮ ಸಂವಹನ ಕಲೆಯ ಜೊತೆಗೆ ಏಕಾಗ್ರತೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ ಎಂದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯಶೋಧರ್ ಸಾಲಿಯಾನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್, ‘ಕೊಂಡಾಟದ ನಿರ್ದೇಶಕ ಅಕ್ಷತ್ ಅಮೀನ್, ರಂಗನಿರ್ದೇಶಕ ದಿವಾಕರ ಕಟೀಲ್ ಉಪಸ್ಥಿತರಿದ್ದರು.
ರಾಧಿಕಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. 25 ದಿನಗಳ ಕಾಲ ರಂಗ ಶಿಬಿರವು ನಡೆಯಿತು. ಕೊನೆಯಲ್ಲಿ ಶಿಬಿರಾರ್ಥಿಗಳಿಂದ ಝಂ ಝಂ ಆನೆ ಮತ್ತು ಪುಟ್ಟ ನಾಟಕ ಪ್ರದರ್ಶನಗೊಂಡಿತು.