ಪತಂಜಲಿ ಯೋಗ ಸಮಿತಿ, ಉಡುಪಿ, ಇದರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ರವಿವಾರ ಕಡಿಯಾಳಿಯ ಶ್ರೀ ಶರ್ವಾಣಿ ಮಂಟಪದಲ್ಲಿ ಯಶಸ್ವಿಯಾಗಿ ಜರುಗಿತು.
ಪತಂಜಲಿ ಯೋಗ ವಿಸ್ತಾರಕರಾದ ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಗ ಶಿಕ್ಷಕನಿಗೆ ತನ್ನ ವೃತ್ತಿ ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮತ್ತು ಧ್ಯಾನ ಅತೀ ಅಗತ್ಯವಾಗಿದೆ ಎಂದು ಯೋಗದ ಪೂರಕ ಲಾಭಗಳ ಬಗ್ಗೆ ವಿವರಿಸಿ, ನೆರೆದ ಸಭಿಕರನ್ನು ಕೆಲ ನಿಮಿಷಗಳ ಕಾಲ ಧ್ಯಾನಾವಸ್ಥೆಗೆ ಕೊಂಡೊಯ್ದು ಧ್ಯಾನದ ಸ್ವಯಂ ಅನುಭವವನ್ನು ಮಾಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ವಿಜಯರಾಘವ ರಾವ್ ಉಡುಪಿ ಪತಂಜಲಿ ಯೋಗ ಸಮಿತಿಯ ಸರಣಿ ಕಾರ್ಯಕ್ರಮಗಳನ್ನು ಕೊಂಡಾಡಿ, ಶಿಕ್ಷಕರನ್ನು ಗೌರವಿಸುವ ಇಂತಹ ಕಾರ್ಯಕ್ರಮವನ್ನು ಪ್ರಶಂಸಿಸಿದರು.
ಮತ್ತೋರ್ವ ಮುಖ್ಯ ಅತಿಥಿ ದಾಸವಾಣಿ ಗಾಯನದಲ್ಲಿ ಗೋಲ್ಡನ್ ಬುಕ್ ಅವಾರ್ಡ್ ವಿಜೇತೆ ವಿದುಷಿ ಸಂಗೀತಾ ಬಾಲಚಂದ್ರ ರವರು ದೇವಿ ಸ್ತುತಿ ಹಾಡಿ ಕಾರ್ಯಕ್ರಮಕ್ಕೆ ಸಂಗೀತದ ಮೆರಗು ನೀಡಿದರು. ಅವರ ಸಂಗೀತ ಕ್ಷೇತ್ರದ ವಿಶ್ವಮಟ್ಟದ ಸಾಧನೆಗೆ ಜಿಲ್ಲಾ ಸಮಿತಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಪತಂಜಲಿ ಯೋಗ ಪೀಠ ಹರಿದ್ವಾರದಲ್ಲಿ ಪರಿಣತಿ ಪಡೆದು ಮುಖ್ಯ ಯೋಗ ಶಿಕ್ಷಕರಾಗಿರುವ 10 ಯೋಗ ಸಾಧಕರಿಗೆ ಜಿಲ್ಲಾ ಸಮಿತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ವೆಂಕಟೇಶ್ ಮೆಹಂದಳೆ ಹಾಗೂ ಸುಮಂಗಲಾ ಆರ್. ಭಟ್ ಸನಾತನ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕಕ್ಷೆಯ ಯೋಗಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪತಂಜಲಿ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ, ಪತಂಜಲಿ ಸರಣಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವನೆಗೈದು, ಇತ್ತೀಚೆಗೆ ನೇಪಾಳದಲ್ಲಿ ನಡೆದ ಪ್ರವಾಹ ದುರಂತಕ್ಕೆ ಪತಂಜಲಿ ಸಂಸ್ಥೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ ದೊಡ್ಡ ಮೊತ್ತದ ಕೊಡುಗೆಯನ್ನು ಸ್ಮರಿಸಿದರು.
ವೇದಿಕೆಯಲ್ಲಿ ಪ್ರಭಾರಿಗಳಾದ ವೆಂಕಟೇಶ್ ಮೆಹಂದಳೆ, ಜಗದೀಶ್ ಕುಮಾರ್, ಹರಿಪ್ರಸಾದ್ ಕೆ, ಶ್ಯಾಮಲಾ ಕೆ, ರೋಹಿತ್ ಬಲ್ಲಾಳ್, ನಾಗರಾಜ್ ಶೇಟ್, ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಲಕ್ಷ್ಮಣ ಕಾಮತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
