‘ಗುರು ಹಿರಿಯರನ್ನು ಗೌರವಿಸಿ, ದೇವರಲ್ಲಿ ಶ್ರದ್ಧೆ, ನಂಬಿಕೆ ಇಡಿ. ತಮ್ಮ ತಮ್ಮ ಕೆಲಸಗಳಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಿ. ದುಶ್ಚಟಗಳಿಂದ ದೂರವಿರಿ, ಡಿಜಿಟಲ್ ಇಕ್ವಿಪ್ಮೆಂಟ್ಗಳನ್ನು ಮಿತವಾಗಿ ಬಳಸಿ, ಹಿತಕ್ಕಾಗಿ ಬಳಸಿ’ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪದೇಶಿಸಿದರು.
ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ, ದ್ವಿತೀಯ ಪಿಯುಸಿ ರ್ಯಾಂಕ್ ವಿಜೇತರು ಹಾಗೂ ರಾಷ್ಟಿçÃಯ ಮಟ್ಟದ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಡಾ|ಅಶೋಕ್ ಕಾಮತ್ರವರು ಮಾತನಾಡಿ, ‘ವಿದ್ಯಾರ್ಥಿಗಳು ಲಭ್ಯವಿರುವ ಸಮಯದ ಸಮರ್ಪಕ ನಿರ್ವಹಣೆ ಮಾಡಿಕೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಬಹುಮುಖ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಕೇವಲ ಅಂಕಗಳೇ ಎಲ್ಲವೂ ಅಲ್ಲ. ಅದು ಕಲಿಕೆಯ ಒಂದು ಮಾನದಂಡ. ಕಲಿಕೆಯು ನಿರಂತರವಾಗಿರಬೇಕು. ಒತ್ತಡದಿಂದ ಕಲಿಯಬಾರದು. ಕಲಿಕೆಯ ಮೂಲ ಸಂತಸ. ಮಾದಕದ್ರವ್ಯ ವ್ಯಸನಗಳ ಬಗ್ಗೆ ಪೋಷಕರು ಎಚ್ಚರವಿರಬೇಕು. ಸಕಾರಾತ್ಮಕ ಕಲಿಕೆಯಲ್ಲಿ ನಕಾರಾತ್ಮಕ ಭಾವನೆಯನ್ನು ತೊರೆದು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು’ ಕಿವಿಮಾತು ಹೇಳಿದರು.
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಡಾ|ಎ.ಪಿ.ಭಟ್ ಮಾತನಾಡಿ ‘ಪೋಷಕರು ಮಕ್ಕಳಿಗೆ ಮನೆಯಲ್ಲಿ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಟ್ಟು ಮಕ್ಕಳ ಸಂಸ್ಕಾರಯುತ ಏಳಿಗೆಗೆ, ಸರ್ವಾಂಗೀಣ ಉನ್ನತಿಗೆ ಕಾರಣವಾಗಬೇಕು’ ಎಂದು ಹೇಳಿದರು. ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ಗೌರವ ಕಾರ್ಯದರ್ಶಿ ಪ್ರೊ.ರಮೇಶ್ ಹಂದೆಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಆಡಳಿತಮಂಡಳಿಯು ಅರ್ಹ ವಿದ್ಯಾರ್ಥಿಗಳಿಗೆ ೫೨ ಲಕ್ಷ ರೂಪಾಯಿ ಪೋಷಕ ಧನ ನೀಡಿ ವಿದ್ಯಾರ್ಜನೆಗೆ ಪ್ರೋತ್ಸಾಹಿಸಿದೆ.
ಕಾಲೇಜಿನ ಪ್ರಾಂಶುಪಾಲರಾದ ಸಿ.ಸುರೇಶ್ ತುಂಗರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀದೇವಿ ಬಾಳಿಗರವರು ಕಾಲೇಜಿನ ನೀತಿ ನಿಯಮ, ಶೈಕ್ಷಣಿಕ ಶಿಸ್ತಿನ ಬಗೆಗೆ ಮಾಹಿತಿ ನೀಡಿದರು. ಪ್ರತಿಮಾ ಬಾಳಿಗರವರು ಕಾರ್ಯಕ್ರಮವನ್ನು ನಿರೂಪಿಸಿದರು. ದೀಪಿಕಾ ವಂದಿಸಿದರು. ವಿದ್ಯಾರ್ಥಿನಿಯರು ಸ್ವಾಗತ ನೃತ್ಯ ಮಾಡಿದರು.

0 ಕಾಮೆಂಟ್ಗಳು