ಅಧಿಕಮಾಸೇ.. ಅಧಿಕ ಫಲಂ

33 ತಿಂಗಳಿಗೊಮ್ಮೆ ಅಧಿಕವಾಗಿ ಬರುವ ಮಾಸ ಅಧಿಕಮಾಸ. ಶ್ರೀ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭನಿಗೆ ಅತ್ಯಂತ ಪ್ರಿಯವಾದ ಅನಂತ ಪುಣ್ಯ ಮಾಸ. ಈ ಮಾಸ ದುದ್ದಕ್ಕೂ ಶ್ರದ್ಧಾ ಭಕ್ತಿಯಿಂದ ಕನಿಷ್ಟ 33 ಪ್ರದಕ್ಷಿಣೆ ನಮಸ್ಕಾರ ದ ಜೊತೆಗೆ ಆತನ 33 ದಿವ್ಯ ನಾಮ ಸ್ಮರಣೆಗಳನ್ನು ನಿರಂತರ ಮಾಡುವ ಮೂಲಕ ಮೈಗಂಟಿದ ಕಶ್ಮಲಗಳನ್ನು ಕ್ಷಯಗೊಳಿಸುವ... ಪಾಪಗಳನ್ನು ತೊಳೆದುಕೊಳ್ಳುವ ಮಾಸ ಇದಾಗಿದೆ. ಗ್ರಹಗಳಲ್ಲಿ ಶ್ರೇಷ್ಠ ರವಿ ಗ್ರಹ, ನಕ್ಷತ್ರಗಳಲ್ಲಿ ಶ್ರೇಷ್ಠ ಧ್ರುವ ನಕ್ಷತ್ರ ,ತರುಗಳಲ್ಲಿ ಶ್ರೇಷ್ಠ ಕಲ್ಪತರು, ಮೃಗಗಳಲ್ಲಿ ಶ್ರೇಷ್ಠ ಕಾಮಧೇನು ಅದೇ ರೀತಿ ಮಾಸಗಳಲ್ಲಿ ಶ್ರೇಷ್ಠ ಈ ಅಧಿಕ ಮಾಸ. ಕಾರಣ . . .ಈ ಮಾಸದ ಒಡೆಯನೇ ಜಗನ್ನಿಯಾಮಕನಾದ ಪುರುಷೋತ್ತಮ ನಾಮಕ ಸಾಕ್ಷಾತ್ ಶ್ರೀಮನ್ನಾರಾಯಣ. ಈ ತಿಂಗಳಲ್ಲಿ ನಿತ್ಯಕರ್ಮಾನುಷ್ಠಾನಗಳನ್ನು ಭಕ್ತಿ ಪೂರ್ವಕವಾಗಿ ಶ್ರೀಹರಿಗೆ ಸಮರ್ಪಿಸುವುದರಿಂದ ಪಂಚಭೂತಗಳಿಂದ ನಿರ್ಮಿತವಾದ ಈ ದೇಹದಲ್ಲಿ ಸಕಲ ದೇವತೆಗಳು ಬಂದು ನೆಲೆಸುತ್ತಾರಂತೆ. 

ಅಧಿಕ ಮಾಸಾಚರಣೆಯನ್ನು ಸ್ವಗೃಹದಲ್ಲಿ ಮಾಡುವುದರಿಂದ ಮನೆಯೊಳಗೆ ಅಡಗಿರುವ ದುಷ್ಟ ಶಕ್ತಿಗಳು ಸುಟ್ಟು ಭಸ್ಮವಾಗುತ್ತವೆ. ಮನೋಕ್ಲೇಶಗಳು ದೂರವಾಗಿ ಚಿಂತಿತ ಮನೋಕಾಮನೆಗಳು ಸಾಕಾರಗೊಳ್ಳುವುದರಲ್ಲಿ ಸಂಶಯವಿಲ್ಲ. 

ಆದರೆ ಈ ಮಾಸವನ್ನು ಮಲಮಾಸವೆಂದೂ ಕರೆಯುತ್ತಾರೆ. ಮದುವೆ ಮುಂಜಿ ಗೃಹಪ್ರವೇಶ ಇತ್ಯಾದಿ ಮಂಗಳ ಕಾರ್ಯಗಳು ಈ ಮಾಸದಲ್ಲಿ ನಿಷಿದ್ಧ. ಇದು ಸಂಕ್ರಾಂತಿ ರಹಿತ ಮಾಸವೂ ಹೌದು. ದೂರದ ತೀರ್ಥ ಸ್ನಾನ, ಪ್ರಾಯಶ್ಚಿತ್ತ ಕರ್ಮಗಳು, ಕ್ಷೌರ ಕರ್ಮ ಇತ್ಯಾದಿಗಳನ್ನು ಮಾಡದಿದ್ದರೆ ಒಳ್ಳೆಯದು. 

ಈ ಮಾಸದಲ್ಲಿ ಶ್ರೀ ದೇವತಾ ಅನುಸಂಧಾನದ ಜೊತೆಗೆ ಶ್ರೀದೇವರಿಗೆ ಸಮರ್ಪಣೆ ಮಾಡಿ 33 ಅಪೂಪ ದಾನ ಅತಿರಸ ದಾನ ಮಾಡಿದರೆ ಬಹಳ ವಿಶೇಷ. ಚಿನ್ನ, ಕಂಚಿನ ಪಾತ್ರೆ, ತುಪ್ಪ, ವಸ್ತ್ರದಾನವನ್ನು ಅದರ ಜೊತೆ ನೀಡಿದರೆ (ಅನುಕೂಲವಿದ್ದವರಿಗೆ ಮಾತ್ರ) ಅತ್ಯಂತ ಶ್ರೇಷ್ಠ. ಶುದ್ಧ ತುಪ್ಪದಿಂದ ಮಾಡಿದ ಅತಿ ಹೆಚ್ಚು ತೂತುಗಳಿರುವ ಅಪೂಪ ಪರಮಶ್ರೇಷ್ಟ . ಅದರಲ್ಲಿರುವ ರಂದ್ರಗಳು ಸ್ವರ್ಗ ವಾಸದ ಅವಧಿಗೆ ಹೋಲಿಕೆಯಂತೆ. ಈ 33 ಅಪೂಪಗಳನ್ನು ಶ್ರೀ ಲಕ್ಷ್ಮೀ ಅನಂತ ಪದ್ಮನಾಭನಿಗೆ ಅರ್ಪಿಸುವಾಗ ಭಗವಂತನ 33 ರೂಪಗಳನ್ನು ಮನದಲ್ಲಿ ಚಿಂತನೆ ಮಾಡಬೇಕು. ಈ ಮೂಲಕ ಈ 33 ಸಂಖ್ಯೆಯಲ್ಲಿ ಎಂಟು ಅಷ್ಟವಸುಗಳ ಅಂತರ್ಯಾಮಿ ಭಗವಂತನ ರೂಪವನ್ನು 11 ಏಕಾದಶ ರುದ್ರರ ಅಂತರ್ಯಾಮಿ ಭಗವಂತನನ್ನು ಕೊನೆಯ ಎರಡರಲ್ಲಿ ಪ್ರಜಾಪತಿಯೊಳಗಿನ ಅಘಾರ್ಧನ ರೂಪವನ್ನು ಹಾಗೂ ವಷಟ್ಕಾರಾಂತರ್ಗತ ಶ್ರೀಪತಿ ರೂಪವನ್ನು ಚಿಂತಿಸಿ ಅರ್ಪಣೆ ಮಾಡಿ ಧ್ಯಾನ ಮಾಡಿ ದಾನ ಮಾಡಿದರೆ ಅಧಿಕಸ್ಯ ಅಧಿಕ ಫಲಂ. ಹೀಗಾಗಿ ಈ ಅಧಿಕಮಾಸದಲ್ಲಿ ಅಪೂಪ ಸೇವೆಗೆ ಬಹಳ ಮಹತ್ವವಿದೆ. 

ಈ ಅಧಿಕಮಾಸದಲ್ಲಿ ಶ್ರೀ ದೇವರಿಗೆ 33 ರಂಗವಲ್ಲಿ, 33 ಭಜನೆ, 33 ವಿವಿಧ ಪರಿಮಳ ಪುಷ್ಪಗಳು, 33 ಗೆಜ್ಜೆ ವಸ್ತ್ರ ಸಾಧ್ಯವಾದಲ್ಲಿ 33 ಬಾರಿ ಲಕ್ಷ್ಮಿ ಶೋಭಾನೆ ಮಾಡಿದರೆ ಬಹಳ ಶುಭಕರ. 33 ಮುತ್ತೈದೆಯರಿಗೆ ಅರಶಿನ ಕುಂಕುಮ ವಸ್ತ್ರದಾನ ಇತ್ಯಾದಿ ... 33 ಬ್ರಹ್ಮಚಾರಿ ಆರಾಧನೆ, 33 ನಾಮಾವಳಿ ಪಠಣ .... ಪಾಪ ಕ್ಷಯಾರ್ಥ ಅಖಂಡ ದೀಪ ಸೇವೆ, ಸೂರ್ಯೋದಯದ ಮುನ್ನ ತೀರ್ಥ ಸ್ನಾನ, ಗೋದಾನ ಈ ಮಾಸದಲ್ಲಿ ವಿಶೇಷ ಫಲಗಳನ್ನು ನೀಡುತ್ತದೆ.

ವೈಜ್ಞಾನಿಕವಾಗಿ ಚಿಂತನೆ ಮಾಡಿದರೂ ಕೂಡ ನಾವು ನಿರ್ವಹಿಸುವ ಎಲ್ಲಾ ಕಾರ್ಮಾನುಷ್ಟಾನಗಳು ನಮ್ಮ ದೇಹ ಮತ್ತು ಮನಸ್ಸನ್ನು ಸಂಪೂರ್ಣವಾಗಿ ಶುದ್ಧಿ ಮಾಡುವುದರಲ್ಲಿ ...ಜೀವನದಲ್ಲಿ ನವೋತ್ಸಾಹ ತುಂಬುವಲ್ಲಿ ಎಳ್ಳಷ್ಟೂ ಸಂಶಯವಿಲ್ಲ. 

ಅದೇ ರೀತಿ ಈ ಮಾಸದಲ್ಲಿ ತುಪ್ಪದ ದೀಪ ಸೇವೆ ಬಹಳ ವಿಶೇಷತೆಯನ್ನು ಹೊಂದಿದೆ. ತುಪ್ಪ ಆರೋಗ್ಯವರ್ಧಕ ರೋಗನಿರೋಧಕ ಆನಂದವರ್ಧಕ ಮತ್ತು ಜ್ಞಾನವರ್ಧಕ. ಶ್ರೀ ದೇವರಿಗೆ ತುಪ್ಪದ ದೀಪಗಳನ್ನು ಹಚ್ಚುವುದರಿಂದ ಅದರ ಬೆಳಕು ನಮ್ಮ ಪಾಪಗಳನ್ನೆಲ್ಲ ಓಡಿಸಿ ಸುಖ ಸಂಪತ್ತು ಸಮೃದ್ಧಿಗಳನ್ನು ನೆಲೆಗೊಳಿಸುತ್ತದೆ. 

ಹಾಗಾಗಿ

 ಗೃಹಾಣೇಮಂ ಮಯಾದತ್ತಂ ಸುದೀಪಂ ಪುರುಷೋತ್ತಮ |

 ಪ್ರಸಾದ ಸುಮುಖೋ ಭೂತ್ವಾ ವಾ೦ಛಿತಾರ್ಥ ಪ್ರದೋಭವII

ಎಂದು ಶ್ರೀ ದೇವರನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿ ಆತನ ಪರಮ ಕೃಪೆಗೆ ನಾವೆಲ್ಲ ಪಾತ್ರರಾಗೋಣ II

~ಲೇಖನ : ರಾಜೇಶ್ ಭಟ್ ಪಣಿಯಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು