ಕಾಪು ಮಹಿಳಾ ಕಿಸಾನ್ ಉತ್ಪಾದಕಾ ಕಂಪೆನಿ-ವಿಶ್ವ ಪರಿಸರ ದಿನಾಚರಣೆ

ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿ.ಪಂ ಉಡುಪಿ, ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪೆನಿ (ನಿ) ಮತ್ತು ಕಾಪು ತಾಲೂಕಿನ ಅಡ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಗುರು ಇಕೋ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಅಡ್ವೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಚರಿಸಲಾಯಿತು. ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಪಂಚಾಯತ್ಎನ್ ಆರ್ ಎಲ್ ಎಮ್ ಜಿಲ್ಲಾ ವ್ಯವಸ್ಥಾಪಕರಾದ ಡಾ.ಸೌಮ್ಯಾ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಇಂದು ನಮ್ಮ ಪರಿಸರವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಕುಡಿಯುವ‌ ನೀರು,ಉಸಿರಾಡುವ ಗಾಳಿ ಪರಿಶುದ್ಧವಾಗಿರಬೇಕೆಂದರೆ ನಮ್ಮ ಸುತ್ತಲಿನ ಪರಿಸರ ಉಳಿಯಬೇಕು. ಗಿಡ, ಮರಗಳು ಕೇವಲ ಮಾನವನಿಗೆ ಮಾತ್ರವಲ್ಲ ಭೂಮಿಯ ಮೇಲಿನ ಪ್ರತೀಯೊಂದು ಜೀವಿಗೂ ಅತೀ ಅಗತ್ಯ.ಆದ್ದರಿಂದ ಪರಿಸರವನ್ನು ಕಾಪಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು. ಮಹಿಳಾ ಕಿಸಾನ್ ಕಂಪೆನಿಯ (ಎಂಕೆಪಿಸಿ). ನಿರ್ದೇಶಕಿ ಗೀತಾ ವಾಗ್ಳೆಯವರು ಮಾತನಾಡಿ ಇಂದು ಮಕ್ಕಳಲ್ಲಿ ಮೊಬೈಲ್ ಚಟ ಅತಿಯಾಗಿರುವುದರಿಂದ ಇತರ ಹವ್ಯಾಸಗಳು ಕಡಿಮೆಯಾಗುತ್ತಾ ಬಂದಿವೆ.ನಮ್ಮ ಬದುಕು ಆರೋಗ್ಯದಿಂದ ಸಾಗಬೇಕಾದರೆ ನಮ್ಮ ಪರಿಸರವನ್ನು ನಾವು ಹಸಿರಾಗಿಸಿಕೊಳ್ಳಬೇಕು.ಗಿಡ, ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವ, ಹಾಗೂ ಉಳಿಸುವ ಕೆಲಸ ನಮ್ಮಿಂದಾಗಬೇಕು. ಆದ್ದರಿಂದ ಮೊಬೈಲ್ ಬಿಡಿ-ಗಿಡ ನೆಡಿ-ಪಾಠದತ್ತ ಗಮನ ಕೊಡಿ ಎಂದು ಕಿವಿಮಾತು ಹೇಳಿದರು.ಶಾಲಾ ಮುಖ್ಯ ಶಿಕ್ಷಕಿ ಕವಿತಾ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಂಪೆನಿಯ ಪರಿಸರ ಕಾಳಜಿಯನ್ನು ಶ್ಲಾಘಿಸಿದರು.

ಎಂಕೆಪಿಸಿ ಅಧ್ಯಕ್ಷೆ ಉಷಾ ಎನ್. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ನಮ್ಮ ದೇಶದ ಪ್ರಧಾನಿಯವರ "ಏಕ್ ಪೇಡ್ ಮಾ ಕೇ ನಾಮ್" ಯೋಜನೆ ಎಲ್ಲಾ ಕಡೆಗಳಲ್ಲೂ ಅನುಷ್ಠಾನಕ್ಕೆ ಬರುವಂತೆ ನಾವೆಲ್ಲರೂ ಶ್ರಮಿಸಬೇಕು ಎಂದರು.. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು,ಶಾಲಾ ಶಿಕ್ಷಕ ವೃಂದ, ಹಾಗೂ ಎಂಕೆಪಿಸಿಯ ನಿರ್ದೇಶಕರುಗಳಾದ ಪವಿತ್ರಾ ಗಿರೀಶ್,ಕವಿತಾ, ಕಸ್ತೂರಿ,ಮಮತಾ ವಾಗ್ಳೆ, ಕಂಪೆನಿಯ ಲೆಕ್ಕಾಧಿಕಾರಿ ಸುಶ್ಮಿತಾ ಮುಂತಾದವರು ಉಪಸ್ಥಿತರಿದ್ದರು. ಕಂಪೆನಿ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ರೀನಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು