ಉಡುಪಿ : ಪೋಷಕರು ತಮ್ಮ ಮಕ್ಕಳಿಗೆ ರೋಲ್ ಮಾಡೆಲ್ ಆಗಬೇಕಾಗಿದೆ ಎಂದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.
ಅವರು ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪೋಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಮಕ್ಕಳಿಗೆ ಪೋಷಕರು ಎಳವೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಹೇಳಿಕೊಡಬೇಕು.
ಇತ್ತೀಚಿಗಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ದೂರವಾಗುತ್ತಿವೆ, ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದ ಅವರು, ಕ್ರಿಶ್ಚಿಯನ್ ಹೈಸ್ಕೂಲು ಶತಮಾನ ಕಂಡ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನೀಡಿದ ಜಿಲ್ಲೆಯಲ್ಲಿಯೇ ಶ್ರೇಷ್ಠ ಸಂಸ್ಥೆ ಎಂದರು.
ಶಾಲಾ ಸಂಚಾಲಕ ಐವನ್ ಡಿ ಸೋನ್ಸ್ ಮಾತನಾಡಿ, ಶಾಲೆಯು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಶಾಲೆಗೆ ಬರುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಸಾಲಿನ್ಸ್ ಶಾಲೆಯ ವಿವಿಧ ಚಟುವಟಿಕೆಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಿಟಿಎ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷೆ ಶಾಂಭವಿ ಭಂಡಾರ್ಕರ್, ಕೋಶಾಧಿಕಾರಿ ಶಾನವಾಜ್ ಮುಂತಾದವರು ಉಪಸ್ಥಿತರಿದ್ದರು.

0 ಕಾಮೆಂಟ್ಗಳು