Header Ads Widget

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎಂಟು ಜನ ಮಂಗಳೂರು ಪೊಲೀಸ್ ವಶಕ್ಕೆ

 

ಮಂಗಳೂರು ಮೇ 3: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಒಟ್ಟು ಎಂಟು ಜನ ಶಂಕಿತರನ್ನು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಎಂಟು ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಈ ಪ್ರಕರಣ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದ್ದೂ ಹತ್ಯೆ ಹಿಂದೆ ಕಾಣದ ಕೈಗಳು ಇವೆ ಎಂದು ಬಿಜೆಪಿ ಆರೋಪಿಸಿದೆ.

ಮಂಗಳೂರಿನ ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತ. ಹಿಂದೊಮ್ಮೆ ನಡೆದ ಕೊಲೆ ಆರೋಪ ಇವರ ಮೇಲಿತ್ತು. ಈ ಕೊಲೆ ಸೇಡನ್ನು ತೀರಿಸಿಕೊಳ್ಳಲು ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಹಿಂದೂ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.


ಸುಹಾಸ್ ಶೆಟ್ಟಿ ಕಾರಿಗೆ ಐದಾರು ಮಂದಿ ನಡುರಸ್ತೆಯಲ್ಲಿ ಗೂಡ್ಸ್ ವಾಹನದಿಂದ ಗುದ್ದಿ ತಲ್ವಾರ್‌ಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಸುಹಾಸ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಫೋನ್‌ನಲ್ಲೂ ಸೆರೆಯಾಗಿದೆ. ಗುರುವಾರ (ಮೇ 1) ರಾತ್ರಿ ಈ ಘಟನೆ ನಡೆದ ಬಳಿಕ ಶುಕ್ರವಾರ (ಮೇ 2) ಮಂಗಳೂರು ಬಂದ್‌ಗೆ ಹಿಂದೂ ಕಾರ್ಯಕರ್ತರು ಕರೆ ನೀಡಿದ್ದರು. ಇದರಿಂದಾಗಿ ಕಳೆದ ದಿನ ಮಂಗಳೂರು ನಿಶಬ್ಧವಾಗಿತ್ತು. 


ರಸ್ತೆಗಿಳಿದ ವಾಹನಗಳ ಮೇಲೆ ಕಲ್ಲೂ ತೂರಾಟ ನಡೆಸಿ ಉದ್ರಿಕ್ತರ ಗುಂಪು ಆಕ್ರೋಶ ಹೊರ ಹಾಕಿತ್ತು. ಈ ನಡುವೆ ಆರೋಪಿಗಳ ಭೇಟೆಗಾಗಿ ಮಂಗಳೂರು ಪೊಲೀಸ್ ಕಮಿಷನರ್‌ ಅನುಪಮ್ ಅಗರ್‌ ವಾಲ್ ಪೊಲೀಸರ ಐದು ತಂಡಗಳನ್ನು ರಚನೆ ಮಾಡಿದ್ದರು. ಇದೀಗ ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಎಂಟು ಜನ ಶಂಕಿತರನ್ನು ಹೆಡೆಮುರಿ ಕಟ್ಟಿದ್ದಾರೆ.


ಕೊಲೆ ಮಾಡಿದ ಬಳಿಕ ಸ್ವಲ್ಪ ದೂರದಲ್ಲಿ ಆರೋಪಿಗಳು ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಇದೇ ಆಧಾರದ ಮೇಲೆ ಮಂಗಳೂರು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಅವಿತ್ತಿದ್ದ ಎಂಟು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 


ಸುಹಾಸ್ ಹತ್ಯೆಯ ಬಳಿಕ ಮಂಗಳೂರು ಬೂದಿಮುಚ್ಚಿದ ಕೆಂಡದಂತಾಗಿದೆ. ಇಂದು ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಘಟನೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಈ ಕೊಲೆಯ ಹಿಂದೆ ಇಪ್ಪತ್ತು ಜನರ ಕೈವಾಡವಿದೆ. 


ಇದೇ ಮೊದಲ ಬಾರಿಗೆ ಲೇಡಿ ಡಾನ್‌ಗಳು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ. ಸುಹಾಸ್ ಕೊಲೆ ಮಾಡಿದವರು ಯಾರೂ ಕೂಡ ಮಾಸ್ಕ್ ಹಾಕಿಲ್ಲ. ಕೊಲೆ ಮಾಡುವಾಗ ರಾಜೋರೋಷವಾಗಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಈ ರೀತಿ ಆಗ್ತಾಯಿತ್ತು. ಆದರೀಗ ಮಂಗಳೂರಿನಲ್ಲಿ ಆಗುತ್ತಿದೆ ಎಂದು ಆರ್‌ ಅಶೋಕ್ ಹೇಳಿದ್ದಾರೆ.