Header Ads Widget

ಗುರುವಿನ ಸಮಾನಾಗುವ ತನಕ ದೊರೆಯದಣ್ಣ ಮುಕುತಿ ~ರಾಘವೇಂದ್ರ ಪ್ರಭು ಕವಾ೯ಲು

ಗುರು ಪೂರ್ಣಿಮೆ ನಗುರೋರಧಿಕಂ. ಗುರುಸಾಕ್ಷಾತ್ ಪರಬ್ರಹ್ಮಃ. ಹರ ಮುನಿದರೆ ಗುರುಕಾಯ್ವ, ಗುರು ಮುನಿದರೆ? ಗುಕಾರಂಧಕಾರಶ್ಚ. ಅಜ್ಞಾನವೆಂಬ ಕತ್ತಲೆ ಕಳೆದು ಸುಜ್ಞಾನವೆಂಬ ಪ್ರಕಾಶವನ್ನು ಬೀರುವವ.

ಹೀಗೆ ಗುರುವಿನ ಗುರುತ್ವದ ಬಣ್ಣನೆಗೆ ಅಂತ್ಯವಿಲ್ಲ. ಆದರೆ ಇಂದು ವಿದ್ಯಾರ್ಥಿಗಳಿಗೆ ಗುರು ಎಂದರೆ ಶಿಕ್ಷಕರು, ಇನ್ನೂ ಸುಲಭವಾಗಿ ಮಾಸ್ಟ್ರು ಇದು ತನ್ನ ಗುರುತ್ವವನ್ನು ಕಳೆದುಕೊಂಡು ಲಘುವಾಗಿದೆ. ಶುಲ್ಕವನ್ನು ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡುವವ ಎಂಬುದಕ್ಕೆ ಸೀಮಿತವಾಗಿದೆ. ಏಕೆಂದರೆ ಇಂದು ಗುರುಪರಂಪರೆ ನಶಿಸಿಹೋಗುತಿರುವ ದಾರಿಯಲ್ಲಿದೆ.

ಆಷಾಢ ಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದು, ಗುರುಪೂರ್ಣಿಮೆಯೆಂದು ಭಾರತೀಯ ಸಂಪ್ರದಾಯ ಮಾನ್ಯ ಮಾಡಿದೆ. ‘ವ್ಯಾಸ’ ಎಂದರೆ ಬೃಹತ್ ಪರಿಧಿ. ಭಗವಾನ್ ವೇದವ್ಯಾಸರು ಮನುಕುಲಕ್ಕೆ ನೀಡಿದ ಜ್ಞಾನಭಂಡಾರ, ಸಾಹಿತ್ಯಸಾಗರ ಅನಂತ, ಅನುಪಮೇಯ


ಗುರುಕುಲಗಳ ನಾಶ ಗುರು ಶಿಷ್ಯ ಪರಂಪರೆಗೆ ದೊಡ್ದ ಅಂತರ: -

ಮಹೋನ್ನತಿಯ ಸಾಂಸ್ಕೃತಿಕ ಪರಂಪರೆಯನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ ಭಾರತಾಂಬೆಯ ಮೇಲೆ ದುಷ್ಟ ಪರಕೀಯ ದುರಾಕ್ರಮಣವು ಸರ್ವನಾಶಕ್ಕೆ ಮೂಲಕಾರಣವಾಯಿತು. ಗುರುಕುಲ ಮಾದರಿಯ ವಿದ್ಯಾಭ್ಯಾಸವನ್ನು ಬೇರು ಸಮೇತ ಕೀಳಲು ಪರಕೀಯರು ಪ್ರಯತ್ನಿಸಿದರು. ಮೆಕಾಲೆಯ ಶಿಕ್ಷಣ ನೀತಿಯೇ ಉತ್ಕೃಷ್ಟವಾದುದೆಂದು ನಂಬಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಏಕೆಂದರೆ ಭಾರತದ ಜುಟ್ಟನ್ನು ತಮ್ಮ ಕೈಯಲ್ಲಿಟ್ಟುಕೊಳ್ಳಲು ನಮ್ಮ ಪ್ರಾಚೀನ ಸಂಸ್ಕಾರ, ಸಂಪ್ರದಾಯಗಳನ್ನು ನಾಶಪಡಿಸಬೇಕಿತ್ತು. ಅಂತಹ ಪಿತೂರಿಗೆ ಮ್ಯಾಕ್ಸ್‌ ಮುಲ್ಲರ್‍ನಂತಹವರನ್ನೂ ಬಳಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ.

ವೇದ ಉಪನಿಷತ್ತುಗಳನ್ನು ತೆಗಳುವ, ಸಂಸ್ಕೃತವನ್ನು -ಅಳಿಸಿಹಾಕುವ ಸಂಚು ರಾಷ್ಟ್ರವಿರೋಧಿಗಳಿಂದ ಸದ್ದಿಲ್ಲದೇ ಸಾಗಿತು. ಯೂರೋಪಿಯನ್ನರು ಭಾರತೀಯರನ್ನು ಗುಮಾಸ್ತರನ್ನಾಗಿಸಿ ಗುಲಾಮಗಿರಿಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಇತ್ತೀಚೆಗೆ ನಮ್ಮ ವಿದ್ಯಾಭ್ಯಾಸದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗುತ್ತಿದ್ದರೂ ಸಂಪೂರ್ಣ ನಮ್ಮತನವನ್ನು ಬೆಳೆಸಿಕೊಳ್ಳುವ ಎತ್ತರಕ್ಕೆ ಏರಲಿಲ್ಲ. ವೇದ ಉಪನಿಷತ್ತುಗಳಿಂದ, ಮಂತ್ರಪಠಣದಿಂದ ಸಂಸಾರ ನಿಭಾಯಿಸಲು ಸಾಧ್ಯವೇ? ಸಂಗೀತ ನಾಟ್ಯದಿಂದ ಹೊಟ್ಟೆ ತುಂಬುವುದೇ? ಇದು ಬುದ್ಧಿಜೀವಿಗಳ ತರ್ಕ. ನಿಜ, ಬದಲಾಗುತ್ತಿರುವ ಜೀವನ ಶೈಲಿಯಂತೆ ಶೈಕ್ಷಣಿಕ ಬದಲಾವಣೆಯೂ ಅವಶ್ಯ. ಆದರೆ ಕೇವಲ ಸಂಪತ್ತಿನ ಸಂಚಯದಲ್ಲಿಯೇ ಸಂಪೂರ್ಣ ತೊಡಗಿಸಿಕೊಂಡು ಅತಿಯಾದ ಭೋಗಕರ ಜೀವನ ವ್ಯರ್ಥಮಾಡುವುದು; ಅದಕ್ಕಾಗಿ ಎಂತಹ ಪ್ರಪಾತಕ್ಕೂ ಇಳಿಯುವ ದುಸ್ಸಾಹಸಕ್ಕೆ ಕಡಿವಾಣ ಅತ್ಯವಶ್ಯಕ.

ಗುರುಪರಂಪರೆಯ ಮಹತ್ವವೆಂದರೆ ಒಬ್ಬ ಗುರು ತನ್ನ ಜ್ಞಾನದಾನದಿಂದ ಅನೇಕ ಶಿಷ್ಯರನ್ನು ಸಿದ್ಧಪಡಿಸಿ ಮುಂದೆ ಅವರೂ ಗುರುಪರಂಪರೆಯನ್ನು ಮುಂದುವರೆಸಿರುವುದು ತಿಳಿದುಬರುತ್ತದೆ. 

ಇನ್ನು ಅವಿವಾಹಿತ ಕನ್ನೆಗೆ ಜನಿಸಿದ ಜಬಾಲನಿಗೆ ತಾನೇ ಉಪಯನಯನ ಮಾಡಿ ವಿದ್ಯೆ ಕಲಿಸಿದ ಗುರು ಹಾರಿದ್ರುಮತರು. ಆತ ಮುಂದೆ ಜಾಬಾಲಿ ಮಹರ್ಷಿ ಎಂದು ಪ್ರಸಿದ್ಧಿಯಾದನು. ಕೇವಲ ಶಸ್ತ್ರ–ಶಾಸ್ತ್ರಗಳಲ್ಲಿ ಮಾತ್ರವಲ್ಲ, ವಿವಿಧ ವೃತ್ತಿಗಳಲ್ಲಿಯೂ ಶಿಷ್ಯರನ್ನು ಪ್ರವೀಣರನ್ನಾಗಿ ಮಾಡುತ್ತಿದ್ದರು. ಅಂಥ ಮಹಾಗುರುಗಳ, ತಪಸ್ವಿಗಳ ಸಂಶೋಧನೆಯಿಂದ, ತ್ಯಾಗದಿಂದ ನಾವಿಂದು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಶ್ರೀ ರಾಮಕೃಷ್ಣಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಗುರು–ಶಿಷ್ಯಸಂಬಂಧ ಲೋಕಕ್ಕೇ ಮಾದರಿ. ಲೋಕಕ್ಕೇ ಗುರುವಾದ ಶ್ರೀಕೃಷ್ಣನೂ ಸಾಂದೀಪನೀ ಆಶ್ರಮದಲ್ಲಿದ್ದು ಶಿಷ್ಯತ್ವ ಸ್ವೀಕಾರ ಮಾಡಿದ್ದು ವಿಶೇಷ. 


ಇಂದಿನ ಗುರು ಶಿಷ್ಯ ಪರಂಪರೆ :-

ಇಂದಿನ ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ನಾವು ಗುರುಶಿಷ್ಯ ಪರಂಪರೆಗೆ ತಿಲಾಂಜಲಿ ನೀಡುತ್ತಿದ್ದೇವೆ.

ಗುರುಸ್ಥಾನದಲ್ಲಿ ಇರಬೇಕಾದ ಕೆಲವು ಗುರುಗಳು ರಾಜಕೀಯದ ರಾಡಿಯನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಕೆಲವು ಶಿಕ್ಷಕರಿಗೆ ಇದೊಂದು ಸಂಬಳ ತರುವ ಸುಲಭದ ವೃತ್ತಿ. ಎಲ್ಲವೂ ವ್ಯಾವಹಾರಿಕ. ಇದರ ಪರಿಣಾಮ ಮಕ್ಕಳು ಪೋಷಕರನ್ನು ದ್ವೇಷಿಸುವ, ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹಲ್ಲೆ ಮಾಡುವಂತಹ ಸಮಾಜದ್ರೋಹಿಗಳನ್ನು ಕಾಣುತ್ತಿದ್ದೇವೆ. 

ಶಿಷ್ಯ ಗುರುವನ್ನೇ ಮದುವೆಯಾಗುವ ಗುರುವಿನೊಂದಿಗೆ ಶಿಷ್ಯ ಪದಾರಿ ಗುರುವನ್ನು ಅಪಹಸ್ಯ ಮಾಡುವುದು ಗುರುವಿಗೆ ಏನು ತಿಳಿಯದು ಅವರಿಗಿಂತ ನಾನು ಶ್ರೇಷ್ಠ ಎಂಬ ಅಹಂ ಭಾವನೆ ಸಮಾಜದಲ್ಲಿದೆ.

ಹಾಗಾಗಿ ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಸೀಮಿತಗೊಳ್ಳದೇ ನೈತಿಕತೆಯನ್ನು ಸಾರುವ ಮಾನವೀಯತೆಯನ್ನು ಪ್ರತಿಬಿಂಬಿಸುವ ಸತ್ಸಂಪ್ರದಾಯದೊಂದಿಗೆ ಸಮಾಜಸೇವೆಗೈಯ್ಯುವಂತೆ ವಿದ್ಯಾರ್ಥಿಗಳನ್ನು ಬೆಳೆಸಬೇಕು. ಪಾಠ ಪುಸ್ತಕದೊಂದಿಗೆ ಬದುಕಿನ ಪುಸ್ತಕವನ್ನು ತೆರೆದು ಬದುಕಿನ ವಿವಿಧ ಮಜಲುಗಳನ್ನು ತಿಳಿಸುವ ಕಾರ್ಯ ಆಗಬೇಕು.

ಶಿಕ್ಷಣ ಸಂಸ್ಥೆಗಳು ಕೇವಲ ವ್ಯಾಪಾರಿ ಕೇಂದ್ರಗಳಾಗಿವೆ, ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಕೇಂದ್ರಗಳಾಗಬೇಕು ಈ ವಿಚಾರವನ್ನು ಬೋಧಕರೂ ಗುರುಪೂರ್ಣಿಮೆಯ ಮಹತ್ವವನ್ನು ಅರಿತು ತಾವೂ ಶ್ರೇಷ್ಠ ಗುರುಗಳಾಗಲು ಪ್ರಯತ್ನಿಸಬೇಕು.

ಒಬ್ಬ ಅತ್ಯುತ್ತಮ ಶಿಷ್ಯ ಗುರುವಿನ ಗುಲಾಮ ಮಾತ್ರವಾಗದೆ, ಗುರುವಿನ ಸಮಾನನಾಗುವ ತನಕ ವಿರಮಿಸದೆ ಕಾರ್ಯಪ್ರವೃತ್ತರಾಗಬೇಕು.

ಗುರು ಶಿಷ್ಯ ಪರಂಪರೆ ಮತ್ತೊಮ್ಮೆ ಗತ ವೈಭವವನ್ನು ಮೂಡಿಸಬೇಕಾಗಿದೆ.

✍🏼 ರಾಘವೇಂದ್ರ ಪ್ರಭು ಕವಾ೯ಲು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು