ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ.
114 ವರ್ಷದ ತಿಮ್ಮಕ್ಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಲುಮರದ ತಿಮ್ಮಕ್ಕನವರು, 385 ಆಲದ ಮರಗಳನ್ನು ನೆಟ್ಟು ಪೋಷಿಸುವುದರೊಂದಿಗೆ ಕರ್ನಾಟಕದಾದ್ಯಂತ ಸುಮಾರು 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಅವರ ಈ ಅಪೂರ್ವ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಸಂದಿವೆ.
ತಿಮ್ಮಕ್ಕನವರು ಸುಮಾರು 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಅಕ್ಷರಸ್ಥರಲ್ಲದಿದ್ದರೂ, ಪರಿಸರ ಸಂರಕ್ಷಣೆಯಲ್ಲಿ ಅವರು ಮಾಡಿದ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಮರಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು, ಅವುಗಳ ಬೆಳವಣಿಗೆಗೆ ಶ್ರಮಿಸಿದ ಅವರ ನಿಷ್ಠೆ ಪ್ರಶಂಸನೀಯ.
ಅವರ ಈ ಮಹತ್ತರ ಕಾರ್ಯವನ್ನು ಗುರುತಿಸಿ, 2019ರಲ್ಲಿ ಭಾರತ ಸರ್ಕಾರವು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1995ರಲ್ಲಿ ಅವರಿಗೆ ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಸಹ ಲಭಿಸಿತು. ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್ನಲ್ಲಿರುವ "ತಿಮ್ಮಕ್ಕನ ಸಂಪನ್ಮೂಲಗಳು" ಎಂಬ ಪರಿಸರ ಶಿಕ್ಷಣ ಸಂಸ್ಥೆಗೆ ಅವರ ಹೆಸರಿಡಲಾಗಿದೆ. ಇದು ಅವರ ಅಂತಾರಾಷ್ಟ್ರೀಯ ಮಟ್ಟದ ಗುರುತಿಸುವಿಕೆಗೆ ಸಾಕ್ಷಿಯಾಗಿದೆ.
ಇದಲ್ಲದೆ, ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ. ಕರ್ನಾಟಕ ಸರ್ಕಾರವು ಅವರನ್ನು "ಪರಿಸರ ರಾಯಭಾರಿ" ಎಂದು ಘೋಷಿಸಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ಗೌರವಿಸಿದೆ.

0 ಕಾಮೆಂಟ್ಗಳು