ಉಡುಪಿ: ಎಲ್ಲಾ ಧರ್ಮಗಳ ಆಚರಣೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿತುಕೊಂಡು ಸಮಾಜದಲ್ಲಿ ಶಾಂತಿಯ ಸಂದೇಶ ಸಾರಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಅವರು ಶನಿವಾರ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಆಯೋಜಿಸಿದ್ದ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಸಮುದಾಯದವರೂ ಜೊತೆಯಾಗಿ ಸೇರಿಕೊಂಡು ಆಚರಿಸುವ ಹಬ್ಬದ ಕ್ರಿಸ್ಮಸ್ ಆಗಿದ್ದು, ಸಮಾಜದ ಏಕತೆಯನ್ನು ಗಟ್ಟಿಗೊಳಿಸುವುದು ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶವಾಗಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಧರ್ಮಕ್ಕೆ ಮಹತ್ವದ ಪಾತ್ರವಿದೆ. ಧರ್ಮ ಜನರನ್ನು ಧರ್ಮ, ಸಾಮಾಜಿಕ, ಆಧ್ಯಾತ್ಮಿಕವಾಗಿ ಪ್ರಭಾವಿತಗೊಳಿಸುತ್ತದೆ. ಪ್ರತಿಯೊಂದು ಧರ್ಮ ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುತ್ತದೆ ಈ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ಮಾತನಾಡಿ ಪ್ರಭು ಯೇಸು ತಮ್ಮ ಸ್ವರ್ಗದ ಸಾಮ್ರಾಜ್ಯವನ್ನು ಬಿಟ್ಟು ಗೋದಲಿಯಲ್ಲಿ ಜನಿಸಿದರು. ಮಾನವ ದೇವರಿಂದ ದೂರ ಸರಿದಾಗ, ಪಾಪಕೂಪದಿಂದ ತೊಳಲಾಡಿದಾಗ ಅವರು ಆಗಮಿಸಿ, ಮತ್ತೆ ಮಾನವರನ್ನು ದೇವರನ್ನಾಗಿಸಲು ಪ್ರಯತ್ನಿಸಿದರು. ಭೂಲೋಕದಲ್ಲಿ ಶಾಂತಿಗಾಗಿ ಶ್ರಮಿಸಿದವರು ಭಾಗ್ಯವಂತರು ಎಂದು ಯೇಸು ಸ್ವಾಮಿ ಸಾರಿದ್ದರು ಅವರ ಸಂದೇಶದಂತೆ ಬದುಕಿ ಬಾಳೋಣ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಧರ್ಮಪ್ರಾಂತ್ಯದ ವತಿಯಿಂದ ಗೌರವಿಸಲಾಯಿತು.
ಎಮ್ ಸಿ ಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಅನಿಲ್ ಲೋಬೊ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಜಿ ಕುರ್ಯ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಸ್ಟೀವನ್ ಡಿಸೋಜಾ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸ್ವಾಗತಿಸಿ ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್ ವಂದಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್ಗಳು