ರೀಲ್ಸ್ ವಿಡಿಯೋಗಾಗಿ ಕಾರಿನಲ್ಲಿ ಸ್ಪಂಟ್ ಮಾಡಲು ಹೋಗಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ಸಾವನ್ನಪ್ಪಿದ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕ. ಯುಗಾದಿ ಹಬ್ಬದ ರಜೆಯ ಹಿನ್ನಲೆ ಬಾಲಕ ಹುಬ್ಬಳ್ಳಿಯಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದ ನಂತರ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡಕ್ಕರ್ ಪ್ಲಾಟ್ ಗೆ ರೀಲ್ಸ್ ಮಾಡಲು ತೆರಳಿದ್ದಾನೆ.
ಬಿಜೆಪಿ ಮುಖಂಡ ಸಂಗಳದ ಅವರ ಪುತ್ರ ನಮಿಷ ಮತ್ತು ಆತನ ಸ್ನೇಹಿತರು ಉಣಕಲ್ ಹಾಗೂ ತಾರಿಹಾಳ ಮಾರ್ಗದಲ್ಲಿರುವ ಮಹಾಲಕ್ಷ್ಮಿ ಲೇಔಟ್ನಲ್ಲಿ ರೀಲ್ಸ್ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಆಡಿ ಕಾರು ಮತ್ತು ಓಲಾ ಎಲೆಕ್ನಿಕ್ ಬೈಕ್ ಬಳಸಲಾಗಿತ್ತು. ಇನ್ನೊಬ್ಬ ಅಪ್ರಾಪ್ತ ಬಾಲಕ ಅತಿವೇಗವಾಗಿ, ಸುಮಾರು 150 ಕಿ.ಮೀ. ವೇಗದಲ್ಲಿ ಆಡಿ ಕಾರು ಚಾಲನೆ ಮಾಡುತ್ತಿದ್ದ.
ಈ ವೇಳೆ, ಎದುರಿನಿಂದ ಓಲಾ ಎಲೆಕ್ನಿಕ್ ಬೈಕ್ನಲ್ಲಿ ಬರುತ್ತಿದ್ದ ನಮಿಷನ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಕಾರು ಅತಿವೇಗದಲ್ಲಿದ್ದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ನಮಿಷ ಚಾಲನೆ ಮಾಡುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಮಿಷ ಬೈಕ್ನಿಂದ ಸುಮಾರು 10 ಅಡಿ ದೂರ ಹಾರಿ ಬಿದ್ದಿದ್ದು, ತಲೆಗೆ ಗಂಭೀರ ಏಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಬಗ್ಗೆ ತಿಳಿಯುತ್ತಲೇ ಅಲ್ಲಿಗೆ ಬಂದ ಸ್ಥಳೀಯರು ಆಡಿ ಚಾಲನೆ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವಿಬ್ಬರು ಸ್ನೇಹಿತರು. ನಾನು ಕಾರನ್ನು ನಿಲ್ಲಿಸಿದ್ದೆ. ಆದರೆ ಅವನೇ ಓಲಾ ಸ್ಕೂಟಿಯಲ್ಲಿ ವೇಗವಾಗಿ ಬಂದು ನನಗೆ ಗುದ್ದಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ.
ಆಡಿ ಕಾರು ಯಾರದ್ದು ಎಂದಿದ್ದಕ್ಕೆ ತಂದೆಯವರ ಕಾರು ಎಂದು ಅಪ್ರಾಪ್ತ ಉತ್ತರಿಸಿದ್ದಾನೆ. ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

0 ಕಾಮೆಂಟ್ಗಳು