ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೊಡಮಾಡುವ 2026ನೇ ಸಾಲಿನ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಬರಹಗಾರ್ತಿ, ಕವಯಿತ್ರಿ ಶ್ರೀಮತಿ ಭಾಗ್ಯಶ್ರೀ ಕಂಬಳಕಟ್ಟ ಇವರು ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದ ಕಂಬಳಕಟ್ಟದವರಾದ ಇವರು 7ನೇ ತರಗತಿಯಲ್ಲಿರುವಾಗಲೇ ಕವನ ಬರೆಯಲು ಆರಂಭಿಸಿ, ಪದವಿ ವ್ಯಾಸಂಗದ ಅವಧಿಯಲ್ಲಿ "ಅಂತರಂಗದ ಹೊನಲು" ಚುಟುಕು ಸಂಕಲನ ಪ್ರಕಟಗೊಂಡು, ಆ ಕೃತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಕವಿಗೋಷ್ಠಿಗಳಲ್ಲಿ ಹಾಗೂ ಕವನವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ, 820ಕ್ಕೂ ಅಧಿಕ ಪ್ರಶಸ್ತಿ ಪತ್ರ, ಅಭಿನಂದನಾ ಪತ್ರಗಳು ಲಭಿಸಿವೆ. ಸ್ಪಂದನ ವಾಹಿನಿಯ "ನಮ್ಮೂರ ಜಾಣೆ" ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಸಾರಗೊಂಡಿದೆ. ಮಂಗಳೂರು ಆಕಾಶವಾಣಿಯಲ್ಲಿ ನ್ಯಾನೋಕಥೆಗಳು ಮತ್ತು ಕವನ ವಾಚನ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವರು ಆಯೋಜಿಸಿದ ರಾಜ್ಯಮಟ್ಟದ "ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ"ಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಇಂಚರ ಸಾಹಿತ್ಯ ಕುಟೀರ, ಕೋಲಾರ ಇವರು "ಇಂಚರ ಸಾಹಿತ್ಯ ಪ್ರಭೆ" ಮತ್ತು "ಕಥಾ ಚಿಂತಾಮಣಿ" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಾಜ್ಯ ಯುವ ಬರಹಗಾರರ ಒಕ್ಕೂಟ, ಶಿವಮೊಗ್ಗ ಇವರು "ಸಾಹಿತ್ಯ ಸಾರಥಿ" ಬಿರುದು ನೀಡಿದ್ದಾರೆ. ಕೃಷ್ಣಪ್ರಿಯ ಕಲಾಬಳಗದವರು "ಕಲಾ ಕೌಸ್ತುಭ" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಜ್ಞಾನತೃಷೆ ಕನ್ನಡ ವೇದಿಕೆಯವರು "ಸಾಹಿತ್ಯ ರತ್ನ" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಸ್ತುತ ಇವರು ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಾರ್ಚ್15 ರಂದು ಅಪರಾಹ್ನ 2 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ ಕುಂದರ್, ಕಾರ್ಯಾದರ್ಶಿಯಾದ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್ ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್ಗಳು