ಮೂಡಿಗೆರೆ ಕೇಂದ್ರ ಸರ್ಕಾರದ ನೂತನ ಉದ್ಯೋಗ ಖಾತ್ರಿ ಯೋಜನೆಯಾದ VB-G-RAM-G ಕಾಯ್ದೆ ಕೂಲಿ ಕಾರ್ಮಿಕರಿಗೆ ಹೆಚ್ಚು ಭದ್ರತೆಯನ್ನು ಆರ್ಥಿಕ ಶಕ್ತಿಯನ್ನು ಮತ್ತು ಶಾಶ್ವತ ಅಭಿವೃದ್ದಿಯನ್ನು ಮಾಡಲಿದೆ ಆದರೆ, ಕಾಂಗ್ರೆಸ್ ಪಕ್ಷ ಕಾಯ್ದೆಯ ಬಗ್ಗೆ ಅಪಪ್ರಚಾರ ಮಾಡಿ ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಜನರಿಗೆ ಸುಳ್ಳು ಮಾಹಿತಿ ಒದಗಿಸುತ್ತಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಡಿಗೆರೆಯಲ್ಲಿ ಹೇಳಿದ್ದಾರೆ.
ಸಂಸದ ಕೋಟ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರ್ಕಲ್ ಲೋಕೇಶ್ ಅವರ ಮನೆಯ ಅಂಗಳದಲ್ಲಿ ಮಾಧ್ಯಮದವರು ಮತ್ತು ಪಕ್ಷದ ಪ್ರಮುಖರೂಡನೆ ಮಾತನಾಡುತ್ತಾ ಹೇಳಿದ್ದಾರೆ. ಮೋದಿ ಸರ್ಕಾರ ಕಡು ಬಡವರು ಮಾಡುತ್ತಿರುವ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಶಕ್ತಿ ಕೊಟ್ಟಿದೆ. UPA ಸರ್ಕಾರ ವಿದ್ದಾಗ ಇದ್ದ ದಿನಕೂಲಿ 175 ನ್ನು NDA ಸರ್ಕಾರ ದಿನಕ್ಕೆ 375 ರೂಪಾಯಿಗೆ ಏರಿಸಿತು. 15 ದಿವಸಗಳವರೆಗೆ ಕಾಯಬೇಕಾಗಿದ್ದ ದಿನಕೂಲಿಯನ್ನು 7 ದಿವಸದಲ್ಲಿ ಪಾವತಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವರ್ಷಕ್ಕೆ ನೀಡುತ್ತಿರುವ 100 ಕೂಲಿ ದಿನಗಳನ್ನ 125 ದಿನಗಳಿಗೆ ಏರಿಸಿ ಕೂಲಿದಾರರಿಗೆ ಕೂಲಿ ದಿನಗಳನ್ನು ಹೆಚ್ಚು ಮಾಡಲಾಗಿದೆ.
ಕೇಂದ್ರದ ಮೋದಿ ಸರ್ಕಾರ ನೀಡಿದ ಆರ್ಥಿಕ ನೆರವನ್ನು ದುರುಪಯೋಗ ಮಾಡಿಕೊಂಡು ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ 22,000 ಕೋಟಿ ರೂಪಾಯಿಗೂ ಮಿಕ್ಕಿ ಭ್ರಷ್ಟಾಚಾರ ಮಾಡಿವೆ. ಕರ್ನಾಟಕ ರಾಜ್ಯ ಒಂದರಲ್ಲಿ 869 ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂದು ಅಂಕಿ ಅಂಶಗಳ ಸಹಿತ ಮಾಹಿತಿ ಬಂದಿದೆ ಹಾಗಾಗಿ ಹಣ ದುರುಪಯೋಗ ತಡೆಗಟ್ಟಲು ಬಡ ಕೂಲಿಗಾರರಿಗೆ ಸಹಾಯ ಮಾಡಲು ಹೊಸ VB-G-RAM-G ಕಾಯ್ದೆ ತಂದಿದ್ದು, ಕಾಂಗ್ರೆಸ್ ಪಕ್ಷದ ಅಪಪ್ರಚಾರವನ್ನು ತಡೆದು VB-G-RAM-G ಕಾಯ್ದೆ ಬಗ್ಗೆ ಸತ್ಯಸಂದೇಶ ನೀಡುವುದಕ್ಕಾಗಿ ಶೀಘ್ರದಲ್ಲಿ ಮೂಡಿಗೆರೆ, ಕಳಸ, ಆಲ್ದೂರುಗಳಲ್ಲಿ ಜನ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಸಂಸದ ಕೋಟ ತಿಳಿಸಿದರು.
ಸಂಸದರ ಜೊತೆ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಮನೋಜ್ ಹಳೆಕೋಟೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಸೇರಿದಂತೆ ಮೂಡಿಗೆರೆ ಮತ್ತು ಆಲ್ದೂರು ಮಂಡಲದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

0 ಕಾಮೆಂಟ್ಗಳು