ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ!

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಕ್ಕೆ ಚಾರಣಕ್ಕೆಂದು ಬಂದಿದ್ದ ಕೇರಳ ಕುಟುಂಬದ 10 ನೇ ತರಗತಿ ವಿದ್ಯಾರ್ಥಿನಿ ನಾಪತ್ತೆಯಾದ ಮೂರು ದಿನಗಳ ಬಳಿಕ, ಅವರ ಮೃತದೇಹ ಇಂದು ಮಾಣಿಕ್ಯಧಾರ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ.

ಡ್ರೋನ್ ಕ್ಯಾಮರಾದಲ್ಲಿ ಮೊದಲು ಮೃತದೇಹ ಪತ್ತೆಯಾಯಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು. ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಅರಣ್ಯ ಇಲಾಖೆ, ಎಸ್.ಡಿ.ಆರ್.ಎಫ್ ತಂಡ ಸೇರಿದಂತೆ ಪ್ರವಾಸಿ ಮಿತ್ರ ಪೊಲೀಸರು ಪ್ರಪಾತಕ್ಕೆ ಇಳಿದು ಮೃತದೇಹ ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ.

ಬಾಲಕಿ ಶ್ರೀ ನಂದಾ, ಆಕೆಯ ಕುಟುಂಬಸ್ಥರು ಸೇರಿ ಕೇರಳದ ಪಾಲಕ್ಕಾಡ್‌ನಿಂದ ಕಳೆದ ಮಂಗಳವಾರ 40ಕ್ಕೂ ಹೆಚ್ಚು ಜನರು ಒಟ್ಟಿಗೆ ಚಿಕ್ಕಮಗಳೂರು ಪ್ರವಾಸ ಹಾಗೂ ಟ್ರೆಕ್ಕಿಂಗ್ ಕೈಗೊಂಡಿದ್ದರು. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮಾಣಿಕ್ಯಧಾರಾ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆಯಲ್ಲಿ ಬಾಲಕಿಯು ನಾಪತ್ತೆಯಾಗಿದ್ದಳು. ಮಂಗಳವಾರ ಸಂಜೆ 5.30ರ ಸುಮಾರಿಗೆ ನಾಪತ್ತೆಯಾಗಿದ್ದು ರಾತ್ರಿ 8 ಗಂಟೆ ವೇಳೆಗೆ ಪೊಲೀಸರಿಗೆ ತಿಳಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಹುಡುಕಾಟ ಆರಂಭ ಮಾಡಿ, ಡ್ರೋನ್ ಮೂಲಕವೂ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ನಿರಂತರ ಕಾರ್ಯಚರಣೆಯ ಭಾಗವಾಗಿ ಶುಕ್ರವಾರ ಇಂದು, ಮಧ್ಯಾಹ್ನದ, ವೇಳೆಗೆ ಮೃತದೇಹ ಪತ್ತೆಯಾಗಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಜೀವಂತವಾಗಿ ಮರಳುತ್ತಾಳೆಂದು ಅಂದುಕೊಂಡವರಿಗೆ ಈ ಸುದ್ದಿ ಬರಸಿಡಿಲೆರೆದಿದೆ.

ಕೆಲವೇ ವಾರಗಳ ಹಿಂದೆ ಕೊಡಗಿನಲ್ಲಿ ಟ್ರೆಕ್ಕಿಂಗ್ ಮಾಡುವಾಗ ನಾಪತ್ತೆಗಿದ್ದ ಕೇರಳದ ಮತ್ತೋರ್ವ ಯುವತಿ ಶರಣ್ಯ ನಾಲ್ಕು ದಿನದ ಬಳಿಕ ಆರೋಗ್ಯವಾಗಿ ಮರಳಿದ್ದರು. ಶ್ರೀ ನಂದಾ ವಿಷಯದಲ್ಲಿ ಈ ನಿರೀಕ್ಷೆ ಹುಸಿಯಾಗಿದೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಕ್ಯಧಾರಾ ಬಳಿ ವಿದ್ಯಾರ್ಥಿನಿ ನಾಪತ್ತೆಯಾದ್ದರಿಂದ, ಗುರುವಾರವೂ ಗಿರಿ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಹುಡುಕಾಟಕ್ಕೆ ಎಸ್‌ಡಿಆರ್‌ಎಫ್‌, ಪೊಲೀಸ್‌, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸೇರಿ ಐದು ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ, ದತ್ತಪೀಠ ಭಾಗದ ಇಳಿಜಾರು ಪ್ರದೇಶ, ದೇವಿರಮ್ಮನ ಬೆಟ್ಟದ ಭಾಗದಲ್ಲಿನ ಪ್ರಪಾತಗಳು ಸೇರಿದಂತೆ ಹಲವು ಕಡೆಗಳಲ್ಲಿ ರೋಪ್‌ ಬಳಸಿ ಬೆಟ್ಟದ ತಪ್ಪಲಿಗಿಳಿದು ಕೂಡಾ ಹುಡುಕಾಟ ನಡೆಸಿದರು. ಜತೆಗೆ ನಾಲ್ಕು ಡ್ರೋನ್‌ಗಳ ಮೂಲಕವೂ ಕಡಿದಾದ ಪ್ರದೇಶಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು.

ಎರಡು ದಿನಗಳಿಂದ ಗಿರಿಭಾಗದಲ್ಲಿ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಗಳ ಜತೆ ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದರು. ಚಿಕ್ಕಮಗಳೂರಿಗೆ ಬರುವ ಮೊದಲು ಬಾಲಕಿಯ ಕುಟುಂಬ ಪ್ರವಾಸ ಮಾಡಿರುವ ಹಂಪಿ, ಕಾಸರಗೋಡು, ಬೆಂಗಳೂರು, ಮಂಗಳೂರಿಗೆ ತಂಡವನ್ನು ಕಳುಹಿಸಿ ಬೇರೆ ಭೇರೆ ಅಯಾಮಗಳಲ್ಲಿ ವಿಚಾರಣೆ ನಡೆಸಲಾಗಿತ್ತು. ಕೇರಳದ ಪೊಲೀಸರ ತಂಡವೂ ಹುಡುಕಾಟ ನಡೆಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು