ನೇಪಾಳದಲ್ಲಿ ಸುದ್ಧಿಯಾಗದ ಹೊಸ ಸರಕಾರ

ನೇಪಾಳದಲ್ಲಿ ಹೊಸ ಸರಕಾರ ಬಂದಿದ್ದು ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗಲಿಲ್ಲ. ಆದರೆ ನಿಜಕ್ಕೂ ಆದ್ಯದಲ್ಲಿ ಸುದ್ದಿಯಾಗಬೇಕಾದ ಸುದ್ದಿ ಇದು. ಏಕೆಂದರೆ ಜಗತ್ತಿನಲ್ಲಿ ಅತ್ಯಂತ ಎಳೆವಯಸ್ಸಿನ ತಂಡವೊಂದು ದೇಶದ ಆಡಳಿತ ಹಿಡಿದಿದೆ.

ಆ ಮಂತ್ರಿಮಂಡಲವನ್ನು ನೋಡಿದಾಗ ಅಚ್ಚರಿ, ಸಂತೋಷ ಮತ್ತು ಅಸೂಯೆ ಎಲ್ಲಾ ಒಟ್ಟೊಟ್ಟಿಗೇ ಆಗುತ್ತದೆ. ಇನ್ನೂ ರೀಲ್ಸ್ ಮಾಡಿಕೊಂಡು, ಕ್ರಿಕೆಟ್ ಗೆ ಬಿದ್ದುಕೊಂಡು, ಆ ವೇರ್ ಈ ವೇರ್ ಎಂದೆಲ್ಲಾ ಹಗಲೂ ಇರುಳೂ ದುಡಿದುಕೊಂಡು, ಪಿಝ್ಝಾ, ಬರ್ಗರ್, ಬಿಯರ್, ದುಕಾಟಿ, ಹಾರ್ಲೆ ಡೇವಿಡ್ಸನ್, ಕವಾಸಕಿ ನಿಂಜಾ ಅಂತ ಮೋಟಾರು ಬೈಕುಗಳಲ್ಲಿ ಹಿಮಾಲಯ ಸುತ್ತಾಡಿಕೊಂಡು, ಇನ್ಸ್ಟಾದಲ್ಲಿ ಕಲರ್ ಕಲರ್ ಕಾಗೆ ಹಾರಿಸಿಕೊಂಡು, ಒಟ್ರಾಸಿ ಭ್ರಮಾಲೋಕದಲ್ಲಿ ವಿಹರಿಸುತ್ತಿರಬೇಕಾದ ತರುಣ ತರುಣಿಯರು ದೇಶ ಕಟ್ಟುವ ಕಾಯಕಕ್ಕೆ ಬಂದಿಳಿದಿದ್ದಾರೆ. ಬನ್ನಿ ಮಕ್ಕಳೇ ದೇಶ ಕಟ್ಟಿ ಬೆಳೆಸಿ ಎಂದು ನೇಪಾಳದ ಜನ ಅವರ ಕೈಗೆ ಅಧಿಕಾರ ಕೊಟ್ಟೇ ಬಿಟ್ಟಿದ್ದಾರೆ.

ಜೆನ್ ಝೀಗಳ ಕ್ರಾಂತಿಯ ಬಳಿಕ ನೇಪಾಳದ ಸರಕಾರ ಉದುರಿ ಬಿದ್ದಿತು. ಚುನಾವಣೆ ನಡೆಯಿತು. ನಾಲ್ಕೇ ನಾಲ್ಕು ವರ್ಷ ತುಂಬಿದ್ದ ಆರ್ ಎಸ್ ಪಿ ಇನ್ನಿಲ್ಲದ ಜಯ ಗಳಿಸಿತು. ಪಾರ್ಲಿಮೆಂಟೊಳಗೆ 275 ಸೀಟುಗಳಲ್ಲಿ 182 ಸೀಟು ತುಂಬಿಕೊಂಡಿತು.

ಹದಿನೈದು ಮಂದಿಯ ತಂಡದ ನೇಪಾಳದ ಸರಕಾರದ ಪ್ರಧಾನಿ ಬಾಲೇಂದ್ರ ಶಾ ಹಸಿಹಸಿ ಯುವಕ. ವಯಸ್ಸು 35. ಇವನು ಓದಿದ್ದು ಬೆಂಗಳೂರಿನಲ್ಲಿ. ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಅವನೊಬ್ಬನೇ ಅಲ್ಲ. ಅವನ ಕ್ಯಾಬಿನೆಟ್ ನಲ್ಲಿರುವ ಮತ್ತೆ ಐವರು ಭಾರತದಲ್ಲೇ ಓದಿದವರು.

ನೇಪಾಳ ಸರಕಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಳೆ ವಯಸ್ಸಿನವರೇ. ಗೃಹ ಮಂತ್ರಿ ಸುದನ್ ಗುರುಂಗ್ ವಯಸ್ಸು 38. ಕಾನೂನು ಮಂತ್ರಿ ಶೋಬಿತಾ ಗೌತಮ್ ವಯಸ್ಸು 30. ಸಾಮಾನ್ಯ ಆಡಳಿತ ಇಲಾಖೆಯ ಮಂತ್ರಿ ಪ್ರತಿಭಾ ರಾವೆಲ್ ಗೆ 32 ವರ್ಷ. ಕೃಷಿ ಸಚಿವೆ ಗೀತಾ ಚೌಧುರಿ 33 ವರ್ಷ ವಯಸ್ಸಿನ ಹೆಣ್ಮಗಳು. ಕಾರ್ಮಿಕ ಮಂತ್ರಿ ದೀಪಕ್ ಶಾಗೆ 34 ವರ್ಷ. ಶಿಕ್ಷಣ ಮಂತ್ರಿ ಸಸ್ಮಿತಾ ಪೋಖಾರೆಲ್ 29 ವರ್ಷದ ಹುಡುಗಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾದಿಗೆ 30 ವರ್ಷ ವಯಸ್ಸು. ಆರೋಗ್ಯ ಸಚಿವ ನಿಶಾ ಮೊಹಾತೋಗೆ 38 ವರ್ಷ ವಯಸ್ಸು. ಸಾರಿಗೆ ಮಂತ್ರಿ ಸುನೀಲ್ ಲಾಮ್ಸಾಲ್ ಗೆ 35. 

ಹೆಚ್ಚಿನ ಎಲ್ಲರೂ ಮಾಸ್ಟರ್ಸ್ ಓದಿದವರು, ಪಿಎಚ್ ಡಿ ಮಾಡಿದವರು. ಒಟ್ಟಾರೆ High Academic Profile ಉಳ್ಳವರು.

ತರುಣ ಕನಸುಗಳು ದೊಡ್ಡದು. Every great accomplishment starts with a youthful dream ಅಂತಾರಲ್ಲ ಹಾಗೆ. ನೇಪಾಳದಂತಹ ಬೆಟ್ಟಗಾಡು ಹಿಮಪರ್ವತದ ನಾಡನ್ನು ಆಳುವುದಕ್ಕೆ ಒಂದು ವಿಚಿತ್ರ ತವಕ ಮತ್ತು ಸೊಗಡು ಬೇಕು. ಈ ತರುಣ ತಂಡದಲ್ಲಿ ಅದು ತುಂಬಿಕೊಂಡಂತಿದೆ. This is a time for bold measures, This is the country, and we are the generation ಎನ್ನುತ್ತಾ ನೂರಂಶದ ಕಾರ್ಯಕ್ರಮವನ್ನು ಯುವ ಸರಕಾರ ಪ್ರಕಟಿಸಿದೆ. 


ನೇಪಾಳದ ಶಿಷ್ಟಾಚಾರ ಹೇಗೆ ಎಂದರೆ ಪ್ರಧಾನಿ ಅಧಿಕಾರ ಸ್ವೀಕರಿಸಿದ ಬಳಿಕ ತನ್ನ ಮೊದಲ ವಿದೇಶ ಪ್ರವಾಸವನ್ನು ಭಾರತದಿಂದ ಆರಂಭಿಸುವುದು. ಹಿಂದಿನ ಪ್ರಧಾನಿ ಓಲಿ ಆ ಶಿಷ್ಟಾಚಾರವನ್ನು ಮುರಿದು ಚೀನಾಕ್ಕೆ ಹೋಗಿದ್ದ. ಕಾರಣ ಆತನದ್ದು ಸಿಪಿಎನ್ –ಯುಎಂಎಲ್ ಎಂಬ ಕಮ್ಯುನಿಸ್ಟ್ ಪಕ್ಷ. ಸಹಜವಾಗಿಯೇ ಆತ ಚೀನಾ ಪರ ಒಲವು ಹೊಂದಿದವನಾಗಿದ್ದ. ಅದನ್ನು ಬಳಸಿಕೊಂಡು ಚೀನಾ ನೇಪಾಳದೊಳಗೆ ಕಡ್ಡಿ ಆಡಿಸುತ್ತಿತ್ತು. ಈಗ ಹೊಸ ಹುಡುಗರ ತಂಡ ಬಂದಿದೆ. 74 ವರ್ಷದ ಓಲಿಯನ್ನು ಜೈಲಿಗೆ ಹಾಕಿದೆ.

ಭಾರತದ ಪರವಾಗಿ ಈ ತರುಣ ತರುಣಿಯರ ಸರಕಾರ ಹೇಗೆ ಇರಲಿದೆ ಎಂಬುದನ್ನು ನೋಡಬೇಕು.

ಯಾವುದಕ್ಕೂ ಒಂದು ಆಲ್ ದ ಬೆಸ್ಟ್ ಹೇಳಿಬಿಡೋಣ.

~ವಾಟ್ಸಾಪ್ ಯೂನಿವರ್ಸಿಟಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು