ಉಡುಪಿ : ದಿನಾಂಕ 20/04/2026ರಂದು ಡಾ. ಎಂ.ಎ.ಸಲೀಂ, ಐ.ಪಿ.ಎಸ್., ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಬೆಂಗಳೂರುರವರು ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪಡೆ, ಮಲ್ಪೆ ಹಾಗೂ ಜಿಲ್ಲಾ ಪೊಲೀಸ್ ಕಛೇರಿ, ಉಡುಪಿ ಜಿಲ್ಲೆ, ಉಡುಪಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಕರಾವಳಿ ಕಾವಲು ಪಡೆ, ಮಲ್ಪೆಯ ಪರಿವೀಕ್ಷಣೆ ಸಮಯ ಶ್ರೀ ಅಮಿತ್ ಸಿಂಗ್, ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು ಹಾಗೂ ಶ್ರೀ ವಿಕಾಸ್ ಕುಮಾರ್ ವಿಕಾಸ್, ಪೊಲೀಸ್ ಮಹಾನಿರೀಕ್ಷಕರು, (ಒ.ಪಿ.ಎಸ್.) ಹಾಗೂ ಆಂತರಿಕ ಭದ್ರತಾ ವಿಭಾಗ, ಬೆಂಗಳೂರು ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಯವರು ಉಪಸ್ಥಿತರಿದ್ದರು.
ನಂತರ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಶ್ರೀ ಅಮಿತ್ ಸಿಂಗ್, ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು, ಶ್ರೀ ಹರಿರಾಮ್ ಶಂಕರ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಶ್ರೀ ಸುಧಾಕರ್ ಎಸ್. ನಾಯ್ಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಹಿತ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಯವರು ಉಪಸ್ಥಿತರಿದ್ದರು. ಸಭೆಯ ವೇಳೆ ಜಿಲ್ಲೆಯಲ್ಲಿ ಕೋಮುಸೌಹಾರ್ದತೆಗೆ ಪೊಲೀಸರು ಕೈಗೊಂಡ ಕ್ರಮವನ್ನು ಶ್ಲಾಘಿಸಿ ಇದೇ ರೀತಿ ಮುಂದುವರೆಸಿಕೊಂಡು ಹೋಗಲು ಸೂಚಿಸಿದರು. ರೌಡಿ ಆಸಾಮಿಗಳ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಿದರು. ಸೊತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವ ಜೊತೆಗೆ ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಅಪರಾಧ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಲು ಸೂಚಿಸಿದರು. “ಆಸರೆ” ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಎಸ್.ಪಿ. ಆಗಿದ್ದ ವೇಳೆಯಲ್ಲಿ ತಾನು ಪರಿಚಯಿಸಿದ್ದು, ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ ಅನುಷ್ಠಾನಗೊಳಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಇದನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಗೊಳಿಸಿರುವುದನ್ನು ಶ್ಲಾಘಿಸಿದರು. ಅಂತೆಯೇ ಇತರ “ಸಮುದಾಯ ಪೊಲೀಸ್” ವ್ಯವಸ್ಥೆಗಳಾದ ಮನೆ-ಮನೆಗೆ ಪೊಲೀಸ್, ಸ್ಪಂದನ, ಮಕ್ಕಳ ಸಹಾಯವಾಣಿಗಳನ್ನೂ ಸಹ ಬಲಪಡಿಸಲು ಸೂಚಿಸಿದರು. ಉಡುಪಿ ಜಿಲ್ಲಾ ನಾಗರೀಕರು ಸುಶಿಕ್ಷಿತರಿದ್ದು, ಶಾಂತಿ ಪ್ರೀಯರಾಗಿರುತ್ತಾರೆ. ಶೈಕ್ಷಣಿಕವಾಗಿ ಉಡುಪಿ ಜಿಲ್ಲೆಯು ಹೇಗೆ ಮಂಚೂಣಿಯಲ್ಲದೆಯೋ ಅದೇ ರೀತಿ ಉಡುಪಿ ಜಿಲ್ಲಾ ಪೊಲೀಸರು ಸಹ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾದರಿ ಪೊಲೀಸ್ ಆಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ಶ್ರೀ ಸುಧಾಕರ್ ಎಸ್. ನಾಯ್ಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರು ಸ್ವಾಗತಿಸಿ, ವಂದನಾರ್ಪಣೆಗೈದರು.

0 ಕಾಮೆಂಟ್ಗಳು