ಮಣಿಪಾಲ: ಇಲ್ಲಿನ ಸಮೀಪದ ಹೆರ್ಗಾ ಗ್ರಾಮದ ಹೊಳೆಬಾಗಿಲು ಹೊಳೆಯಲ್ಲಿ ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಹೆರ್ಗಾ ಗ್ರಾಮದ ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಸುಜಿತ್ ಕುಮಾರ್ (42) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಇವರು, ಎಂದಿನಂತೆ ಕೆಲಸದ ನಿಮಿತ್ತ ಮನೆಯಿಂದ ರಿಕ್ಷಾದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಹೊಳೆಬಾಗಿಲು ನದಿಗೆ ಈಜಲೆಂದು ಇಳಿದಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿದ್ದರು.ಸುಜಿತ್ ಕುಮಾರ್ ಅವರು ಮನೆಗೆ ಹಿಂತಿರುಗದಿದ್ದಾಗ ಮತ್ತು ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ನದಿಯ ಕಿನಾರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ದುಡಿಯುವ ಕೈಯನ್ನು ಕಳೆದುಕೊಂಡ ಕುಟುಂಬವು ತೀವ್ರ ಶೋಕ ಸಾಗರದಲ್ಲಿ ಮುಳುಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 ಕಾಮೆಂಟ್ಗಳು