ಮೇ 17ರಂದು ಬಂಟಕಲ್ಲಿನಲ್ಲಿ ಆರ್‌ಎಸ್‌ಬಿ, ಬಿಜಿಎಸ್‌ಬಿ ವಧು-ವರರ ಪರಿಚಯ ಸಮಾವೇಶ ‘ಋಣಾನುಬಂಧ’

ಶಿರ್ವ: ಆರ್‌ಎಸ್‌ಬಿ ಹಾಗೂ ಬಿಜಿಎಸ್‌ಬಿ ಸಮುದಾಯದ ವಧು-ವರರಿಗಾಗಿ ‘ಋಣಾನುಬಂಧ’ ಹೆಸರಿನ ವಧು-ವರರ ಪರಿಚಯ ಸಮಾವೇಶವು ಮೇ 17ರಂದು ಬಂಟಕಲ್ಲಿನ ರೋಟರಿ ಸಭಾಭವನದಲ್ಲಿ ನಡೆಯಲಿದೆ. ಬೆಂಗಳೂರು ಆರ್‌ಎಸ್‌ಬಿ ಮತ್ತು ಬಿಜಿಎಸ್‌ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ನಡೆಯಲಿರುವ ಸಮಾವೇಶದಲ್ಲಿ ವಿವಾಹಯೋಗ್ಯ ವಧು-ವರರು ಭಾಗವಹಿಸಿ ಪರಸ್ಪರ ಪರಿಚಯ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವವರು ತಮ್ಮ ಸ್ವವಿವರ ಹಾಗೂ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ ತರಬೇಕಾಗಿದೆ. ಕಾರ್ಯಕ್ರಮದಲ್ಲಿ ನೋಂದಣಿ, ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ವಧು-ವರರೊಂದಿಗೆ ಇಬ್ಬರು ಕುಟುಂಬ ಸದಸ್ಯರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ಸಮಾವೇಶದ ವಿಶೇಷ ಆಕರ್ಷಣೆಯಾಗಿ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಪ್ರೇರಣಾದಾಯಕ ಉಪನ್ಯಾಸವನ್ನು ಆಯೋಜಿಸಲಾಗಿದೆ. ಖ್ಯಾತ ವಾಗ್ಮಿ ಸುಬ್ರಹ್ಮಣ್ಯ ಕುಲೇದು ಅವರು “ಜೀವನ ದೃಷ್ಟಿಕೋನವನ್ನು ಹೇಗೆ ಹೊಂದಿಸುವುದು?” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇಂದಿನ ಯುವಪೀಳಿಗೆಗೆ ಜೀವನ ಮೌಲ್ಯಗಳು, ಗುರಿ ಸಾಧನೆ ಮತ್ತು ಸಕಾರಾತ್ಮಕ ಚಿಂತನೆಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಸಮುದಾಯದ ವಧು-ವರರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಪ್ರಧಾನ ಸಂಚಾಲಕ ಎಂ.ಡಿ. ಪ್ರಭು ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು