ಪುತ್ತೂರು ಬ್ರಾಹ್ಮಣ ಮಹಾಸಭಾದ ವಾರ್ಷಿಕೋತ್ಸವ ಸಮಾರಂಭವು ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕಿನ ಎ.ಜಿ.ಎಂ. ರಮೇಶ್ ವೈದ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಲ್ಲಿ ಸಂಘಟನೆಗಳು ಬೆಳೆಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವಲ್ಲಿ ಮುತುವರ್ಜಿ ವಹಿಸಿ ಇಂತಹ ಮಾದರಿ ಸಂಘಟನೆಗಳ ಮೂಲಕ ಸಮಾಜ ಸೇವೆ ಮಾಡುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ, ಕಲಾವಿದ ಪ್ರಮೋದ್ ಮಂತ್ರಿ ಮತ್ತು ಬಹುಮುಖ ಪ್ರತಿಭೆ ಆದ್ಯತಾ ಭಟ್ ಇವರನ್ನು ಸನ್ಮಾನಿಸಲಾಯಿತು. ಐವತ್ತು ಸಂವತ್ಸರಗಳ ಸಾರ್ಥಕ ದಾಂಪತ್ಯ ಜೀವನ ಪೂರೈಸಿದ ವಲಯದ ಸದಸ್ಯ ದಂಪತಿಗಳನ್ನು ಗೌರವಿಸಲಾಯಿತು. ಈ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ ವಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಪತ್ಬಾಂಧವ ಸಮಿತಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ರೂ. 40,000.00 ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಾರ್ದನ ಕೊಡವೂರು, ಮೋಹನ ಉಡುಪ, ಸುಬ್ರಹ್ಮಣ್ಯ ಉಡುಪ ಮತ್ತು ಚೈತನ್ಯ ಎಂ.ಜಿ. ಇವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಉಪಸಮಿತಿಗಳ ಸಂಚಾಲಕರುಗಳನ್ನು ಗೌರವಿಸಲಾಯಿತು.
ತೆರಿಗೆ ಸಲಹೆಗಾರ ಪ್ರಕಾಶ್ ಭಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ವಲಯದ ಗೌರವಾಧ್ಯಕ್ಷ ಪಿ. ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ರಾಮಚಂದ್ರರಾವ್ ಕೆ.ಜಿ. ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಸುಬ್ರಹ್ಮಣ್ಯ ಉಡುಪ, ಸುರೇಶ್ ಕಾರಂತ, ಸುನೀತಾ ಚೈತನ್ಯ, ಶುಭಪ್ರಸಾದ್, ಸುರೇಖಾ ಗುರುರಾಜ್, ಅನುಪಮಾ, ಶ್ರೀಲಕ್ಷ್ಮಿ, ಗಾಯತ್ರಿ ಭಟ್, ವಿಜಯ್ ಸಹಕರಿಸಿದರು. ಕಾರ್ಯದರ್ಶಿ ನಿರಂಜನ್ ಭಟ್ ವರದಿ ವಾಚಿಸಿ ವಂದಿಸಿದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಹೂವಿನ ಪೂಜೆ ಮತ್ತು ವಲಯದ ಸದಸ್ಯರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

0 ಕಾಮೆಂಟ್ಗಳು