ಕುಂದಾಪುರ: ಆಯುರ್ವೇದ ವೈದ್ಯರ ಪರಸ್ಪರ ಬಾಂಧವ್ಯ, ಅನುಭವ ಹಂಚಿಕೆ ಹಾಗೂ ವೃತ್ತಿಪರ ಸಮನ್ವಯಕ್ಕೆ ಪೂರಕವಾಗಿ ಶ್ರೀ ಅಮೃತೇಶ್ವರಿ ಎಜುಕೇಷನಲ್ ಟ್ರಸ್ಟ್ನ ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ‘ವೈದ್ಯಸಂಗಮ’ ಎಂಬ ಆಯುರ್ವೇದ ವೈದ್ಯರ ಸಮ್ಮಿಲನ ಕಾರ್ಯಕ್ರಮ ಶನಿವಾರ ಸಂಜೆ ಯುವ ಮೆರಿಡಿಯನ್ನ ಗ್ರ್ಯಾಮಿ ಹಾಲ್ನಲ್ಲಿ ನಡೆಯಿತು.
ಆಯುರ್ವೇದ ವೈದ್ಯರ ನಡುವೆ ಸ್ನೇಹಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರೊಂದಿಗೆ, ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು, ಅನುಭವಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಪರಸ್ಪರ ವಿಚಾರ ವಿನಿಮಯಕ್ಕೆ ಕಾರ್ಯಕ್ರಮ ಉತ್ತಮ ವೇದಿಕೆಯಾಯಿತು.
ಶ್ರೀ ಅಮೃತೇಶ್ವರಿ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ ಆನಂದ ಸಿ. ಕುಂದರ್, ಉಪಾಧ್ಯಕ್ಷ ಶ್ರೀ ಜಯಶೀಲ ಶೆಟ್ಟಿ, ಕಾರ್ಯದರ್ಶಿ ಶ್ರೀ ಉದಯಕುಮಾರ್ ಶೆಟ್ಟಿ, ಖಜಾಂಚಿ ಶ್ರೀ ವಿನಯಕುಮಾರ್ ಶೆಟ್ಟಿ ಹಾಗೂ ಸದಸ್ಯ ಡಾ. ಕೆ. ಮುರಳಿಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಕೆ. ಎಸ್. ಅವರ ಮಾರ್ಗದರ್ಶನದಲ್ಲಿ ನಡೆದ ‘ವೈದ್ಯಸಂಗಮ’ದಲ್ಲಿ 90ಕ್ಕೂ ಅಧಿಕ ಆಯುರ್ವೇದ ವೈದ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಆಯುರ್ವೇದದ ಪರಂಪರೆಯನ್ನು ಆಧುನಿಕ ವೈದ್ಯಕೀಯ ಜ್ಞಾನ ಮತ್ತು ಅನುಭವಗಳೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಇಂತಹ ಸಮ್ಮಿಲನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ವೈದ್ಯರ ಸ್ನೇಹ, ಸಹಕಾರ ಮತ್ತು ವೃತ್ತಿಪರ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ ‘ವೈದ್ಯಸಂಗಮ’ವು ಯಶಸ್ವಿಯಾಗಿ ಸಂಪನ್ನಗೊಂಡಿತು.
