ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ಉಡುಪಿ: ಶ್ರೀಪುತ್ತಿಗೆ ಮಠಾಧೀಶರಾದ ವಿಶ್ವ ಮಾನ್ಯ ಯತಿಕುಲ ಚಕ್ರವರ್ತಿ ಶ್ರೀ ಸುಗುಣೇಂದ್ರತೀರ್ಥರಿಂದ ಸ್ಥಾಪಿಸಲ್ಪಟ್ಟ ಸುಗುಣ ಶ್ರೀ ಭಜನಾ ಮಂಡಳಿಯ ಗುರುಗಳಾದ ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುಪೂರ್ಣಿಮೆಯ ನಿಮಿತ್ತ ಜುಲೈ 29 ರಂದು ಗುರುವಂದನ ಕಾರ್ಯಕ್ರಮ ನಡೆಯಿತು. ಗೀತಾ ಮಂದಿರದ 6ನೇ ಮಹಡಿಯಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಪುತ್ತಿಗೆ ಮಠದ ನಿಕಟಪೂರ್ವ ವಿಶ್ವಗೀತಾ ಪರ್ಯಾಯುದುದ್ದಕ್ಕೂ ಉಷಾ ಹೆಬ್ಬಾರ್ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದೀ ಜೀಯವರು ಪಾಲ್ಗೊಂಡ ಯಶಸ್ವೀ ಲಕ್ಷ ಕಂಠ ಗೀತಾ ಪಾರಾಯಣ ಸಂದರ್ಭದಲ್ಲಿ ಅವರು ನೀಡಿದ ವಿಶೇಷ ತರಬೇತಿಯನ್ನು ಪ್ರಶಂಸಿಸಿ, ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದಿರುವದಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು.

 ಕಾರ್ಯಕ್ರಮ ಆಯೋಜಿಸಿದ್ದ ಸುಗುಣ ಶ್ರೀಭಜನಾ ಮಂಡಳಿಯ ಯಶೋದ ಆರ್., ವಿದ್ಯಾರಾವ್ , ಭಾರತಿ, ಸಹಭಾಗಿತ್ವ ನೀಡಿದ ಯುವ ಬ್ರಾಹ್ಮಣ ಪರಿಷತ್ ಬ್ರಾಹ್ಮಿ ಭಜನಾ ಮಂಡಳಿಯ ಆಶಾ ರಾವ್, ದಿವ್ಯಾ , ಬೆಂಗಳೂರಿನ ದಾಸ ನಮನ ಭಜನಾ ತಂಡದ ರಶ್ಮಿ , ಉಷಾ ಹೆಬ್ಬಾರ್ ಪುತ್ರ ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮೂರು ತಂಡಗಳ ವತಿಯಿಂದ ಶಾಲು, ಸೀರೆ, ಹಾರ,ಫಲ - ತಾಂಬೂಲ, ಅರಸಿನ ಕುಂಕುಮ, ಸ್ಮರಣಿಕೆ, ಗುರುದಕ್ಷಿಣೆ ಸಹಿತ ಗುರುವಂದನೆ ಸಲ್ಲಿಸಲಾಯಿತು.

ಅಭಿನಂದನಾ ಮಾತುಗಳನ್ನಾಡಿದ ಶ್ರೀಮಠದ ವಿದ್ವಾನ್ ಕೆ.ವಿ. ರಮಣಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 200 ಕ್ಕೂ ಅಧಿಕ ಭಜನಾ ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು