ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಮತ್ತು ತುಳುಕೂಟ ಉಡುಪಿ ಸಹಯೋಗದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ನೆನಪಿನಲ್ಲಿ "ಕಿನ್ಯ ಜೋಕ್ಲೆಡ್ದ್ ಸೊರ ಸಂಪು"ಕಾರ್ಯಕ್ರಮ ಉಡುಪಿಯ ಮುಕುಂದ ಕ್ರಪಾ ಶಾಲೆಯಲ್ಲಿ ನಡೆಯಿತು. ತುಳು ಭಾಷೆಯ ಉಳಿವಿಗಾಗಿ ಹೊಸ ಹೆಜ್ಜೆಯನ್ನು ಇಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಉಡುಪಿಯ ಎಲ್ಲಾ ಶಾಲೆಗಳಲ್ಲಿ ಆಯೋಜಿಸುವ ಯೋಜನೆಯನ್ನು ತುಳುಕೂಟ ಉಡುಪಿ ಮತ್ತು ರೇಡಿಯೋ ಮಣಿಪಾಲ್ ಹೊಂದಿದೆ. ಈ ನಿಟ್ಟಿನಲ್ಲಿ ಮುಕುಂದ ಕ್ರಪಾ ಶಾಲೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು.. ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಕಯ್ಯಾರ ಕಿಞ್ಞಣ್ಣ ರೈ ಯವರು ಬರೆದ ಪದ್ಯವನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರ. ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಾಗಿ ನಾಯಕರಾಗಿ, ಕಾಸರಗೋಡು ವಿಲೀನಿಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ನಿರಂತರವಾಗಿ ದುಡಿದವರು, ಕನ್ನಡ ಮತ್ತು ತುಳು ಭಾಷೆಗೆ ಅಪಾರವಾದ ಕೊಡುಗೆ ನೀಡಿದ ಕಿಞ್ಞಣ್ಣ ರೈ ಯವರನ್ನು ಈ ನಾಡಿನ ಜನತೆ ಎಂದಿಗೂ ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ತುಳುಕೂಟದ ಉಪಾಧ್ಯಕ್ಷರು ಹಾಗೂ ಕಿಞ್ಞಣ್ಣ ರೈಯವರ ಅಳಿಯನಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ತುಳುಕೂಟದ ಗೌರವ ಸಲಹೆಗಾರರಾದ ಶ್ರೀ ವಿಶ್ವನಾಥ ಶೆಣೈ,ರೇಡಿಯೋ ಮಣಿಪಾಲದ ಕಾರ್ಯಕ್ರಮ ಸಂಯೋಜಕರಾದ ಡಾ. ರಶ್ಮಿ ಅಮ್ಮೆಂಬಳ, ಮುಕುಂದ ಕ್ರಪಾ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಿನುತಾ ಎಸ್. ನಾಯಕ್ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕಿ ಶ್ರೀಮತಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕ ಮಾತನಾಡಿ ತುಳು ಭಾಷೆ ಸಂಸ್ಕೃತಿ ಉಳಿವಿಗಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ತುಳುಕೂಟದ ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಪ್ರಭಾವತಿ ವಿಶ್ವನಾಥ್ ಸ್ವಾಗತ ಮಾಡಿ, ಕಾರ್ಯದರ್ಶಿ ಶ್ರೀ ಗಂಗಾಧರ ಕಿದಿಯೂರು ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯವನ್ನು ಹೇಳಿ ರಂಜಿಸಿದರು. ಇದು ರೇಡಿಯೋ ಮಣಿಪಾಲದಲ್ಲಿ ಪ್ರಸಾರವಾಗಲಿದೆ.

0 ಕಾಮೆಂಟ್ಗಳು