ಜೂನ್ ಮತ್ತು ಜುಲೈ ಎರಡು ತಿಂಗಳ ಮೀನುಗಾರಿಕೆ ನಿಷೇಧ ಬಳಿಕ ಅಗಸ್ಟ್ 1 ರಿಂದ ಮೀನುಗಾರಿಕಾ ಋತು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಲ್ಪೆ ಬಂದರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲ್ಪೆ ಬಂದರಿನ ನೂತನ ಪ್ರವೇಶ ದ್ವಾರದ ಕಾಮಗಾರಿಯ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ, ಹಾಗೂ ಕಾಮಗಾರಿಯ ಹಿನ್ನೆಲೆ ಪಾರ್ಕಿಂಗ್ ಪ್ರದೇಶದಲ್ಲಿ ಸಂಗ್ರಹಿಸಿರುವ ಮರಳನ್ನು ತಕ್ಷಣ ತೆರವು ಮಾಡಿ ವಾಹನಗಳ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸುವಂತೆ ಹೇಳಿದರು.
ಬಂದರಿನ ನಿರ್ಗಮನ ದ್ವಾರ ಅಗಲೀಕರಣಗೊಳ್ಳುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಅಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಈಗಾಗಲೇ ಗುರುತಿಸಿರುವ ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಮನವಿಯಂತೆ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.
ಮಲ್ಪೆ ಬಂದರಿನ ಮಂಜಿ ಧಕ್ಕೆ ಹಾಗೂ ಬಂದರಿನ ಪರಿಸರದಲ್ಲಿ ರಾತ್ರಿ ವೇಳೆ ದಾರಿ ದೀಪದ ಸಮಸ್ಯೆ ಬಗ್ಗೆ ತಕ್ಷಣ ಸಮರ್ಪಕ ದಾರಿ ದೀಪದ ವ್ಯವಸ್ಥೆ, ಬಂದರಿನ ಸ್ವಚ್ಚತೆ, ಭದ್ರತೆಯ ದೃಷ್ಟಿಯಲ್ಲಿ ಸೆಕ್ಯೂರಿಟಿ ಸಿಬ್ಬಂದಿ, ಸಿ.ಸಿ. ಟಿ. ವಿ ಅಳವಡಿಕೆ ಮೊದಲಾದ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಂಡು ಮೀನುಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಸುರೇಶ್ ಸಾಲ್ಯಾನ್, ರವಿ ಸಾಲ್ಯಾನ್, ರಮೇಶ್ ಕೋಟ್ಯಾನ್, ಲಕ್ಷ್ಮೀಶ ಬಂಗೇರ, ಮಲ್ಪೆ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

0 ಕಾಮೆಂಟ್ಗಳು