ಬೆಂಕಿಯ ಬದಲಿಗೆ ಬೆಳಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಶ್ರೀನಾರಾಯಣ ಗುರುಗಳ ಸಂದೇಶ- ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು

ಉಡುಪಿ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಯ ವಿರುದ್ದ ಸಂಘರ್ಷ ರಹಿತವಾದ ಸುಧಾರಣಾ ಕ್ರಾಂತಿಯನ್ನು ರೂಪಿಸಿ ಆ ಮೂಲಕ ಯಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಪ್ರತಿಯೊಂದು ಅನುಷ್ಠಾನ ಹಾಗೂ ಚಿಂತನೆಗಳು ಬೆಂಕಿಯಾಗಿ ಕಾಡುತ್ತಿರುವ ವರ್ತಮಾನದ ಗೊಂದಲಗಳಿಗೆ ಸೂಕ್ತ ಪರಿಹಾರವಾಗಬಲ್ಲ ಬೆಳಕಿನ ಮೌಲ್ಯವನ್ನು ಹೊಂದಿದೆ ಎಂದು ದಯಾನಂದ ಕರ್ಕೇರ ಅಭಿಪ್ರಾಯ ವ್ಯಕ್ತ ಪಡಿಸಿದರು. 



ಅವರು  ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ವತಿಯಿಂದ ರವಿವಾರ ಭುಜಂಗ ಪಾರ್ಕ್ ಜರಗಿದ ಸೇವಾ ಸೌರಭ ಸಂಭ್ರಮದಲ್ಲಿ ಗುರು ಸಂದೇಶವನ್ನು ವಿವರಿಸುತ್ತಾ, ಗುರುಗಳು ಮಾನವೀಯ ಪ್ರಜ್ಞೆಯಿಂದ ಚಳುವಳಿಯನ್ನು ರೂಪಿಸಿ ಭವ್ಯಭವಿಷ್ಯಕ್ಕೆ ದಾರಿ ತೋರಿಸಿದ್ದಾರೆ.


ಅಂತಹದ್ದೆ ದಿಟ್ಟತನದ ನಿಲುವಿನಲ್ಲಿ ಜಾತ್ಯಾತೀತವಾಗಿ ಸತ್ಕಾರ್ಯಗಳನ್ನು ನಡೆಸುತ್ತಾ ಸರ್ವರ ಹಿತಾಸಕ್ತಿಯ ಪ್ರತೀಕವಾದ ಹಳದಿ ಧ್ವಜದೊಂದಿಗೆ ಗುರುಕಟ್ಟೆಯನ್ನು  ಸೌಹಾರ್ದ, ಸಾಮರಸ್ಯ, ಸಮೃದ್ಧಿಯ ಆಶಯದೊಂದಿಗೆ ಸ್ಥಾಪಿಸಿದ ಕರಾವಳಿಯ ಏಕೈಕ ಸಂಘಟನೆಯಾದ ನಾರಾಯಣ ಗುರು ಯುವ ವೇದಿಕೆಯ ಸೇವಾ ವೈಖರಿ ಗುರು ಬಯಸುವಂತದ್ದು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಮಿಥುನ್ ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ , ಉದ್ಯಮಿ ಹರೀಶ್ ಪೂಜಾರಿ ಉಡುಪಿ ವಕೀಲರ ಸಂಘದ ಅಧ್ಯಕ್ಷ    ರೊನಾಲ್ಡ್ ಪ್ರವೀಣ್ ಕುಮಾರ್ , ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ , ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು. ಶಬರೀಶ್ ಸುವರ್ಣ ಸ್ವಾಗತಿಸಿ ಸತೀಶ್ ಕೊಡವೂರ ನಿರೂಪಣೆ ಮಾಡಿ ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಅಮೀನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು