​ಜಮ್ಮು​~ಕಾಶ್ಮೀರ​: ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ~ ಅಂಕಿ ಅಂಶ ಇಲ್ಲಿದೆ


ಜಮ್ಮು ಮತ್ತು ಕಾಶ್ಮೀರದಲ್ಲಿ, ಅದರಲ್ಲೂ ವಿಶೇಷವಾಗಿ ಕಾಶ್ಮೀರದಲ್ಲಿ ಈಗ ಪ್ರವಾಸೋದ್ಯಮದ ಋತು. ದೇಶ, ವಿದೇಶದ ಲಕ್ಷಾಂತರ ಜನರು ಭಾರತದ ಭೂಶಿರದ ಸೌಂದರ್ಯ ಸವಿಯಲು ತಂಡೋಪ ತಂಡ ವಾಗಿ ಬರುವ ಸಮಯ. ಕೆಲವು ವಾರಗಳಿಂದೀಚೆಗೆ ಶ್ರೀನಗರ, ಪಹಲ್ಗಾಮ್‌ ಸೇರಿದಂತೆ ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಜನವೋ ಜನ. 



ಮಾಧ್ಯಮಗಳ ವರದಿ ಪ್ರಕಾರ, ಮಾರ್ಚ್‌ 26ರಂದು ಶ್ರೀನಗರದ ಟ್ಯುಲಿಪ್‌ ಉದ್ಯಾನ ಪ್ರವಾಸಿಗರಿಗೆ ಮುಕ್ತವಾದ ನಂತರ ಈವರೆಗೆ 8.14 ಲಕ್ಷ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. 3000ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರೂ ಈ ಉದ್ಯಾನವನ್ನು ಕಣ್ತುಂಬಿ​ ಕೊಂಡಿದ್ದಾರೆ. 


ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು. ಅಲ್ಲಿನ ಜಿಎಸ್‌ಡಿಪಿಗೆ ಪ್ರವಾಸೋದ್ಯಮ ಶೇ 8.47​ ರಷ್ಟು ಕೊಡುಗೆ ನೀಡುತ್ತದೆ. ಭಯೋತ್ಪಾದನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕುಸಿದಿತ್ತು. 

2021ರಿಂದ ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಂತೆ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡುಬಂದಿತ್ತು. ಕಳೆದ ವರ್ಷ 2.36 ಕೋಟಿಯಷ್ಟು ಪ್ರವಾಸಿಗರು ಭೇಟಿ ನೀಡಿದ್ದರು.

ಪಹಲ್ಗಾಮ್‌ನಲ್ಲಿ ಉಗ್ರರು ಕ್ರೌರ್ಯ ಮೆರೆದ ತಕ್ಷಣವೇ ಸಾವಿರಾರು ಸಂಖ್ಯೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರು ಅಲ್ಲಿಂದ ಊರಿಗೆ ವಾಪಸ್‌ ಆಗಿದ್ದಾರೆ. ಅಂದಾಜಿನ ಪ್ರಕಾರ ಮುಂದಿನ ಮೂರು ತಿಂಗಳಿಗೆ ಕೊಠಡಿಗಳನ್ನು ಕಾಯ್ದಿರಿಸಿದ್ದ ಶೇ 90ರಷ್ಟು ಪ್ರವಾಸಿಗರು, ತಮ್ಮ ಬುಕ್ಕಿಂಗ್‌ ರದ್ದು ಮಾಡಿದ್ದಾರೆ. ಇದು ದಾಳಿಯಿಂದಾಗಿ ಆದ ತಕ್ಷಣದ ಪರಿಣಾಮ. ಆದರೆ, ಈ ಪರಿಣಾಮ ಸುದೀರ್ಘ ಕಾಲ ಇರಲಿದ್ದು, ಜನರ ಬದುಕಿಗೆ ಬರೆ ಎಳೆಯಲಿದೆ.

ಉದ್ಯಮಕ್ಕೆ ಪೆಟ್ಟು: 2019ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತ ಶ್ರಮ ವಹಿಸಿತ್ತು. ಜತೆಗೆ, ಕೆಲವು ವರ್ಷಗಳಿಂದೀಚೆಗೆ ಅಲ್ಲಿನ ಅರ್ಥವ್ಯವಸ್ಥೆ ಸುಧಾರಿಸಿತ್ತು. ಜನರ ತಲಾ ಆದಾಯ ಏರುಮುಖ ವಾಗಿತ್ತು.


2023ರಲ್ಲಿ ಭಾರತವು ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿದ್ದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೃಂಗ ಸಭೆಯನ್ನು ಏರ್ಪಡಿಸಿ, ಹಿಂಸಾಚಾರ ಪೀಡಿತ ನೆಲದಲ್ಲಿ ಈಗ ಸಹಜತೆ ಮರಳಿದೆ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಿತ್ತು. ಈ ಶೃಂಗಸಭೆಯು ಪ್ರವಾಸೋದ್ಯಮ, ಕೈಗಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ವೇದಿಕೆಯನ್ನೂ ಸೃಷ್ಟಿಸಿತ್ತು. 

2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, 2024ರ ಡಿಸೆಂಬರ್‌ವರೆಗೆ ₹1.63 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳು ಬಂದಿದ್ದವು. 5.90 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ ಎನ್ನಲಾ ಗಿತ್ತು. ಈ ದಾಳಿಯು ಈ ಎಲ್ಲ ಪ್ರಯತ್ನಗಳಿಗೂ ಹಿನ್ನಡೆ ಉಂಟುಮಾಡಲಿದೆ ಎಂದು ಹೇಳಲಾಗಿದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು