ಪರಮ ಪೂಜ್ಯ ಪುತ್ತಿಗೆ ಶ್ರೀಪಾದರು ಸನಾತನ ಧರ್ಮ ಸಂಸ್ಕೃತಿ ರಕ್ಷಣೆಗಾಗಿ ವಿಶ್ವಾದ್ಯಂತ ಸ್ಥಾಪಿಸಿರುವ ಕೃಷ್ಣ ಮಂದಿರಗಳಲ್ಲೊಂದಾದ ಅಮೆರಿಕಾದ ಫೀನಿಕ್ಸ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ವೆಂಕಟಕೃಷ್ಣ ದೇವಾಲಯಕ್ಕೆ ಬಿಜೆಪಿ ಯ ಪ್ರಮುಖ ನಾಯಕರಲ್ಲೊಬ್ಬರಾದ ಪ್ರಖರ ವಾಗ್ಮಿ ಶ್ರೀ ಅಣ್ಣಾಮಲೈ ಯವರು ಇಂದು ಭೇಟಿ ನೀಡಿದರು.
ಅಮೆರಿಕಾದ್ಯಂತ ಹಲವು ವಿಶ್ವವಿದ್ಯಾಲಯಗಳಲ್ಲಿ ನಿಗದಿತ ಉಪನ್ಯಾಸ ನೀಡಲು ಆಗಮಿಸಿದ್ದ ಶ್ರೀ ಅಣ್ಣಾಮಲೈ ಯವರು ಫಿನಿಕ್ಸಿನಲ್ಲಿ ಕಾರ್ಯಕ್ರಮವೊಂದರ ಸಂಯೋಜಕರಲ್ಲಿ ಇಲ್ಲಿಯ ಪ್ರಸಿದ್ಧ ದೇವಾಲಯ ವನ್ನು ನೋಡಲು ಅಪೇಕ್ಷೆ ಪಟ್ಟಾಗ ಸಂಯೋಜಕರು ಶ್ರೀ ಮಠದ ಈ ದೇವಾಲಯಕ್ಕೆ ಕರೆದು ಕೊಂಡು ಬಂದರು.
ಈ ದೇವಾಲಯದ ವೈಭವವನ್ನು , ಉಡುಪಿಯ ಪೂಜಾಶೈಲಿಯನ್ನು ನೋಡಿದೊಡನೆ ಬಹಳ ಸಂಭ್ರಮಪಟ್ಟ ಶ್ರೀಯುತರು ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಶ್ರೀಕೃಷ್ಣ ಮಠದಲ್ಲಿ ಪೂಜ್ಯ ಶ್ರೀಪಾದರನ್ನು ಭೇಟಿಯಾದದ್ದನ್ನು ಸ್ಮರಿಸಿಕೊಂಡರು.
ಭಾರತ ದೇಶದ ಮತ್ತು ನೆಚ್ಚಿನ ಪ್ರಧಾನಿ ಹೆಸರಿನಲ್ಲಿ ಅರ್ಚನೆ ಸಲ್ಲಿಸಿದ ಶ್ರೀ ಅಣ್ಣಾಮಲೈ ನಂತರ ಪ್ರಸಾದವನ್ನೂ ಸ್ವೀಕರಿಸಿದರು.
ನೆರೆದ ನೂರಾರು ಭಾರತೀಯರು ಭಾರತ್ ಮಾತಾ ಕೀ ಜೈ ಎಂದು ಉದ್ಘೋಷಿಸುತ್ತಿದ್ದಂತೆ. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.
ದೇವಾಲಯದ ಪ್ರಧಾನ ಅರ್ಚಕ ಕಿರಣ ರಾವ್ ಸ್ವಾಗತಿಸಿ ಪೂಜೆ ಮಾಡಿ ಪ್ರಸಾದವನ್ನಿತ್ತರು.
ಶ್ರೀ ಮಠದ ಸಹ ಅರ್ಚಕರಾದ ಮಂಜುನಾಥ ಭಟ್,ರಾಘವೇಂದ್ರ ಭಟ್, ಗುಂಡು ರಾವ್ ಮತ್ತು ಕಾರ್ಯಕರ್ತರಾದ ಶ್ರೀಧರ್,ರವಿ ರಾವ್,ರಂಗನಾಥ್ ಮತ್ತಿತರರು ಸಹಕರಿಸಿದರು.
ಅಣ್ಣಾಮಲೈ ರವರು ದೂರವಾಣಿ ಮೂಲಕ ಸಂಪರ್ಕಿಸಿ ಮೆಚ್ಚುಗೆಯನ್ನು ಸೂಚಿಸಿರುತ್ತಾರೆ ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ತಿಳಿಸಿರುತ್ತಾರೆ.