ಮಣಿಪಾಲ: ದೇಶಪ್ರೇಮ ಎಂಬುದು ಭಾರತೀಯರಾದ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಬೇಕು. ದೇಶ ಪ್ರೇಮ ಚಿಂತನೆ ಬೆಳೆಸಿಕೊಳ್ಳುದು ನಮ್ಮೆಲ್ಲರ ಜವಾಬ್ದಾರಿ. ಈ ಹಿನ್ನಲೆಯಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಚಿಂತನೆಯನ್ನು ಮೂಡಿಸುವ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆ ಉತ್ತಮ ಕಾರ್ಯಕ್ರಮ ಎಂದು ಮಣಿಪಾಲ್ ಅಕಾಡೆಮಿ ಆಫ್ಹೈಯರ್ ಎಜುಕೇಶನ್ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಅಭಿಪ್ರಾಯ ಪಟ್ಟರು.
ಅವರು ರೇಡಿಯೋ ಮಣಿಪಾಲ 90.4MHz ಸಮುದಾಯ ಬಾನುಲಿ ಕೇಂದ್ರ ಅಕಾಡೆಮಿ ಆಫ್ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಸಹಕಾರದೊಂದಿಗೆ ಮಣಿಪಾಲದ ಎಂ.ಐ.ಸಿ ಸಭಾಂಗಣದಲ್ಲಿ ಆಯೋಜಿಸಿದ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಸಂಸ್ಥೆಯ ನಿರ್ದೇಶಕರಾದ ಡಾ. ಶುಭ ಎಚ್.ಎಸ್ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕರು ಮತ್ತು ರೇಡಿಯೋ ಮಣಿಪಾಲದ ಸಂಯೋಜಕರಾದ ಡಾ. ರಶ್ಮಿ ಅಮ್ಮೆಂಬಳ ಮಾತನಾಡಿ ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರವು, ಸಮುದಾಯ ಬಾನುಲಿಯ ಪರಿಕಲ್ಪನೆಯಂತೆ ಕಾರ್ಯನಿರ್ವಹಿಸುತ್ತಿದ್ದು ಸಮುದಾಯದ ಜನರ ಭಾಗವಹಿಸುವಿಕೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಸಾಧ್ಯವಾಗಿದೆ ಮತ್ತು ಇತರ ಸಮುದಾಯ ಬಾನುಲಿಗಳಿಗಿಂತ ವಿಶೇಷವಾಗಿದೆ ಎಂದು ತಿಳಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ ಜಿಲ್ಲಾ ಮಟ್ಟದ ಪ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಸಮೂಹ ಗಾಯನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 16 ಶಾಲೆಯ ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಗ್ರೀನ್ಪಾರ್ಕ್ ಸೆಂಟ್ರಲ್ಸ್ಕೂಲ್ ಹಿರಿಯಡಕ, ದ್ವಿತೀಯ ಸ್ಥಾನವನ್ನು ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ಮೀಡಿಯಂ ಹೈಸ್ಕೂಲ್ ಗಣಿತನಗರ, ತೃತೀಯ ಸ್ಥಾನವನ್ನು ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು ಉಡುಪಿ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಮಾಧವ ಕೃಪಾ ಶಾಲೆ ಮಣಿಪಾಲ ಮತ್ತು ಸೈಂಟ್ ಫ್ರಾನ್ಸಿಸ್ ಝ್ಜೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉದ್ಯಾವರ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯ್ತು. ಮೋಹನ್ದಾಸ್ ಪೈ, ಪೀಟರ್ ಡಿಸೋಜ, ಕುಶಲ್ ಬೇಕಲ್, ಸುಧೀರ್ ಸಾಮಂತ್, ಸಂದೇಶ್, ಸದಾನಂದ್, ರಮೇಶ್ನಾಯಕ್, ಅನಿತಾ, ಉಮಾ, ಶಶಿಕಲಾ, ವಿದ್ಯಾರ್ಥಿ ಸ್ವಯಂಸೇವಕರಾದ ಅನನ್ಯಾ ಭಾರ್ಗವ್, ಅಲೆಕ್ಸ್ಜಾನ್ಸನ್, ಮಾನ್ಯ, ತೃಪ್ತಿ, ನಾಥನ್ ಸಹಕರಿಸಿದರು.
