ದಿನಾಂಕ 17.09.2025ರಂದು ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ 'ಹಿಂದಿ ದಿವಸ್' ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಮಹಾಮಾಯ ಫೌಂಡೇಷನ್ ನ ಸಂಸ್ಥಾಪಕರಾದ, 'ಸೇವರತ್ನ' ಪ್ರಶಸ್ತಿ ಪುರಸ್ಕೃತರಾದ, ಡಾ|| ಕೆ. ಉಷಾ ಎಸ್. ಪೈ ಅವರು ಆಗಮಿಸಿದ್ದರು. ಡಾ|| ಪೈ ಅವರು "ಹಿಂದಿ ಒಂದು ಸೌಮ್ಯ ಭಾಷೆ ಹಾಗಾಗಿ ಎಲ್ಲರನ್ನೂ ತನ್ನೆಡೆಗೆ ಆರ್ಷಿಸುತ್ತದೆ. ಹಿಂದೆ ಅನೇಕ ಕವಿಗಳು ಹಿಂದಿ ಭಾಷೆಯಲ್ಲಿಯೇ ಪ್ರಭಾವಶಾಲಿ ಸಾಹಿತ್ಯಗಳ ಮೂಲಕ ಜನರಲ್ಲಿ ದೇಶಪ್ರೇಮವನ್ನು ಬಿತ್ತಿದ್ದಾರೆ. ವಿದ್ಯಾರ್ಥಿಗಳೂ ಕೂಡ ಹಿಂದಿಯಲ್ಲಿ ವ್ಯವಹರಿಸುವುದರೊಂದಿಗೆ, ಹಿಂದಿ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸುವಲ್ಲಿ ಪ್ರಯತ್ನ ಪಡಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲರೂ ಉತ್ತಮ ಹಿಂದಿ ಸಾಹಿತಿಗಳಾಗಿ ಹಿಂದಿಯನ್ನು ಉಳಿಸಿ, ಬೆಳೆಸಬೇಕು" ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆಯನ್ನಿತ್ತರು.
ಹಿಂದಿ ದಿವಸ್ ನ ಅಂಗವಾಗಿ ಕಾಲೇಜಿನಲ್ಲಿ ಆಶುಭಾಷಣವೇ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಕಾಲೇಜಿನ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿಂದಿ ಭಾಷೆಗೆ ಸಂಬಂಧಿಸಿದ ಭಿತ್ತಿಪತ್ರ ಪ್ರದರ್ಶನ ಮತ್ತು ರಂಗೋಲಿಗಳೊಂದಿಗೆ ವಿದ್ಯಾರ್ಥಿಗಳು ಸಭೆಯನ್ನು ಅಲಂಕರಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ|| ದೇವಿದಾಸ್ ಎಸ್. ನಾಯ್ಕ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಕೃತ್ತಿಕಾ ಪಿ. ಶೆಣೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪಂಚಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಮಿತಾಳಿ ವಿನಾಯಕ್ ಪೈ ಅತಿಥಿ ಪರಿಚಯವನ್ನು ಹಾಗೂ ಹರ್ಷಿತ್ ಖತ್ರಿ ಸ್ಪರ್ಧಾ ವಿಜೇತರ ಪಟ್ಟಿಯನ್ನು ಓದಿದರು. ಕು. ಸುರಕ್ಷಾ ಪೂಜಾರಿ ಧನ್ಯವಾದ ಸಮರ್ಪಣೆಗೈದರು.
0 ಕಾಮೆಂಟ್ಗಳು