Header Ads Widget

ದ.ಕ. ಉಡುಪಿ ಮೀನು ಮಾರಾಟ ಫೆಡರೇಶನ್ ಮಹಾಸಭೆ ೨೦೨೪-೨೫ ಸಾಲಿನಲ್ಲಿ ರೂ. ೬.೪೧ ಕೋಟಿ ಲಾಭ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ಎಮ್ಮೆಕೆರೆ, ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಯಶ್‌ಪಾಲ್ ಎ. ಸುವರ್ಣ, ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆ ಬೇಡಿಕೆಗಳಿಗೆ ಹಲವು ದಶಕಗಳಿಂದ ಸ್ಪoದಿಸಿ ಮೀನುಗಾರರ ಸಮಸ್ಯೆಗಳಿಗೆ ಧ್ವನಿಯಾಗಿ ಫೆಡರೇಷನ್ ಕಾರ್ಯನಿರ್ವಹಿಸುತ್ತಿದ್ದು, ಮೀನುಗಾರರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಮತ್ಸö್ಯ ಸಂಪದ ಸಹಿತ ಕೇಂದ್ರ ಹಾಗೂ ರಾಜ್ಯ ಸರಕಾರದ ಮೀನುಗಾರಿಕೆ ಯೋಜನೆಗಳನ್ನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಡರೇಶನ್ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಫೆಡರೇಶನ್ ಪ್ರಸಕ್ತ ಸಾಲಿನಲ್ಲಿ ರೂ. ೨೧೨ ಕೋಟಿ ವ್ಯವಹಾರದೊಂದಿಗೆ ಒಟ್ಟು ೬.೪೧ ಕೋಟಿ ವ್ಯಾಪಾರ ಲಾಭ ದಾಖಲಿಸಿದ್ದು, ಹಿಂದಿನ ಹಲವು ವರ್ಷಗಳಿಂದ ಹಲವಾರು ತಾಂತ್ರಿಕ ಕಾರಣಗಳಿಂದ ನಷ್ಟದಲ್ಲಿದ್ದ ಈ ಸಂಸ್ಥೆಯು ಮೀನುಗಾರಿಕೆಗೆ ಉಂಟಾದ ಏರಿಳಿತಗಳ ಸಮಸ್ಯೆಯನ್ನು ಎದುರಿಸಿಕೊಂಡು ಇತ್ತೀಚಿನ ೧೬ ವರ್ಷಗಳಲ್ಲಿ ಒಟ್ಟು ರೂ. ೪೪ ಕೋಟಿ ಲಾಭ ದಾಖಲಿಸುವ ಮೂಲಕ ಕರಾವಳಿ ಜಿಲ್ಲೆಯ ಮಾದರಿ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊoಡಿದೆ.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಂಸ್ಥೆಯನ್ನು ನೋಡಲ್ ಸಂಸ್ಥೆಯಾಗಿ ಆಯ್ಕೆ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳ ಒಟ್ಟು ೨೧ ಮೀನುಗಾರಿಕಾ ಸಂಘಗಳಿಗೆ ತರಬೇತಿ, ಅಧ್ಯಯನ ಪ್ರವಾಸ ಒಳಗೊಂಡoತೆ ಕೇಂದ್ರ ಸರಕಾರದ ಆರ್ಥಿಕ ನೆರವು ಒದಗಿಸುವಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಫೆಡರೇಶನ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ೨೫ ಲಕ್ಷ ಪ್ರತಿಭಾ ಪುರಸ್ಕಾರ, ವರದಿ ಸಾಲಿನಲ್ಲಿ ಸಂಸ್ಥೆಯೊoದಿಗೆ ವ್ಯವಹರಿಸುವ ಸದಸ್ಯ ಗ್ರಾಹಕರಿಗೆ ರೂ. ೪ ಕೋಟಿ ಪ್ರೋತ್ಸಾಹಕ ಉಡುಗೊರೆ, ದೇಣಿಗೆ ಮತ್ತು ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ರೂ. ೨೦ ಲಕ್ಷ ಆರೋಗ್ಯನಿಧಿ ನೀಡಲಾಗಿದೆ ಎಂದರು.

ಫೆಡರೇಶನಿನ ೨೦೨೪-೨೫ ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಯ ಚಟುವಟಿಕೆಗಳ ಬಗ್ಗೆ ಹಾಗೂ ನಿರಂತರ ಲಾಭದಾಯಕವಾಗಿ ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮಹಾಸಭೆಯಲ್ಲಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದರು.

ಸಭೆಯಲ್ಲಿ ಫೆಡರೇಶನಿನ ಉಪಾಧ್ಯಕ್ಷರಾದ ದೇವಪ್ಪ ಕಾಂಚನ್, ವ್ಯವಸ್ಥಾಪಕ ನಿದೇರ್ಶಕರಾದ ಶ್ರೀಮತಿ ದರ್ಶನ್ ಹಾಗೂ ಆಡಳಿತ ಮಂಡಳಿಯ ನಿದೇರ್ಶಕರು, ಸದಸ್ಯರು ಉಪಸ್ಥಿತರಿದ್ದರು.

ಕಳೆದ ಕೆಲವು ವರ್ಷಗಳಿಂದ ನಾಡದೋಣಿ ಮೀನುಗಾರಿಕೆ ಸಂದರ್ಭದಲ್ಲಿ ಉಂಟಾದ ದುರಂತದಲ್ಲಿ ಹಲವಾರು ಮಂದಿ ಮೀನುಗಾರರು ಸಾವಿಗೀಡಾಗಿದ್ದು, ಈ ನಿಟ್ಟಿನಲ್ಲಿ ಫೆಡರೇಶನ್ ನೇತೃತ್ವದಲ್ಲಿ, ವಿವಿಧ ಮೀನುಗಾರಿಕಾ ಸಹಕಾರಿ ಸಂಘಗಳ ಸಹಯೋಗದಲ್ಲಿ ಮೀನುಗಾರಿಕೆ ಇಲಾಖೆಯ ಸಹಕಾರದೊಂದಿಗೆ ನಾಡದೋಣಿ ಮೀನುಗಾರರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಲೈಫ್ ಜಾಕೇಟ್ ನೀಡಲು ನಿರ್ಧರಿಸಿದ್ದು, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ರೂ. ೩ ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು