ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ತಿಂಗಳ ಕಾರ್ಯಕ್ರಮದ ಅಂಗವಾಗಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯದಂತೆ ದೇಶಕ್ಕಾಗಿ ಹೋರಾಡಿದ ಭಾರತೀಯ ಭೂಸೇನೆಯ ನಿವೃತ್ತ ಯೋಧ ಕರ್ನಲ್ ಪ್ರಕಾಶ್ಚಂದ್ರ ಮತ್ತು ಇಂಜಿನಿಯರ್ ಆಗಿದ್ದುಕೊಂಡು ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಶ್ರೀ ರಾಜೇಶ್ ಕುಮಾರ್ ಪುತ್ತೂರು ಇವರನ್ನು ಅಭಿನಂದಿಸಿ ಸನ್ಮಾನಿಸ ಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಸೇನಾನಿ ಕರ್ನಲ್ ಪ್ರಕಾಶ್ಚಂದ್ರ ಅವರು ಮಾತನಾಡುತ್ತಾ ಪ್ರಸ್ತುತ ನಮ್ಮ ಭಾರತೀಯ ಸೇನೆಯನ್ನು ಸೇರಿಕೊಳ್ಳುವ ಯುವಕರ ಸಂಖ್ಯೆ ಬಹಳ ಕಡಿಮೆ ಇದೆ. ಸೇನೆಯನ್ನು ಸೇರಿಕೊಳ್ಳುವುದು ಎಂದರೆ ಕೇವಲ ಯುದ್ಧ ಮಾಡುವುದಕ್ಕಷ್ಟೇ ಸೀಮಿತವಲ್ಲ. ಅಲ್ಲಿ ವಿವಿಧ ರೀತಿಯ ಹುದ್ದೆ ಮತ್ತು ಜವಾಬ್ದಾರಿಗಳು ಇವೆ. ದೇಶಕ್ಕಾಗಿ ಹೋರಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹಾಗಾಗಿ ನಮ್ಮ ಯುವಶಕ್ತಿ ಸೇನೆಯ ವಿವಿಧ ಹುದ್ದೆಗಳನ್ನು ಸವಾಲಾಗಿ ಸ್ವೀಕರಿಸಿ ದೇಶ ಸೇವೆ ಮಾಡಲು ದೀಕ್ಷಾಬದ್ಧರಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಇನ್ನೋರ್ವ ವಿಪ್ರಸಾದಕ ಪ್ರಗತಿಪರ ಕೃಷಿಕ ಶ್ರೀ ರಾಜೇಶ್ ಕುಮಾರ್ ಮಾತನಾಡುತ್ತಾ ಕೃಷಿ ನಮ್ಮ ದೇಶದ ಜೀವನಾಡಿ. ಅದನ್ನ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಕೃಷಿಯನ್ನು ಪ್ರೀತಿಸಿದರೆ ದೇವರನ್ನು ಪ್ರೀತಿಸಿದಂತೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕೆ. ರಘುಪತಿ ಭಟ್, ರೋಬೋಸಾಫ್ಟ್ ನ ಹಣಕಾಸು ವಿಭಾಗದ ಉಪಾಧ್ಯಕ್ಷ ಕೃಷ್ಣರಾಜರಾವ್ ಯುವ ಬ್ರಾಹ್ಮಣ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ್ ಕೆ.ಎನ್. ಸ್ವಾಗತಿಸಿದರು. ಪದ್ಮಲತಾ ವಿಷ್ಣು ಮತ್ತು ಅಮಿತಾ ಕ್ರಮದಾರಿ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಸುನೀತಾ ಚೈತನ್ಯ, ರಾಧಿಕಾ ಚಂದ್ರಕಾಂತ್, ಜ್ಯೋತಿಲಕ್ಷ್ಮಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಿವೇಕಾನಂದ ಪಾಂಗಣ್ಣಾಯ ನಿರೂಪಿಸಿದರು

0 ಕಾಮೆಂಟ್ಗಳು