Header Ads Widget

ಧರ್ಮಸ್ಥಳ ಭಜನಾ ಪರಿಷತ್ತಿನ ಸಮಾಲೋಚನಾ ಸಭೆ

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಸಂಕಲ್ಪಿಸಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ನವೆಂಬರ್ 28 ಮತ್ತು 30ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಮತ್ತು ಭಜನೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಭಜನಾ ಮಂಡಳಿಗಳ ಭಾಗವಹಿಸುವಿಕೆ ಕುರಿತಾಗಿ ಸಮನ್ವಯಾಧಿಕಾರಿಗಳು, ಯೋಜನಾಧಿಕಾರಿಗಳು ಮತ್ತು ವಿವಿಧ ಪದಾಧಿಕಾರಿಗಳ ಸಮಾಲೋಚನಾ ಸಭೆ ರಾಜಾಂಗಣದಲ್ಲಿ ನಡೆಯಿತು. 

ಉಡುಪಿ, ಕುಂದಾಪುರ, ಹೆಬ್ರಿ, ಕಾರ್ಕಳ, ಭಟ್ಕಳ, ಬೈಂದೂರು, ಹೊಸನಗರ, ತೀರ್ಥಹಳ್ಳಿ, ಕಾಪು ವಲಯಗಳ ಸುಮಾರು 200 ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಪಾದರು, ಉಡುಪಿ ಹಾಗೂ ಧರ್ಮಸ್ಥಳ ಕ್ಷೇತ್ರದ ಅವಿನಾಭಾವ ಸಂಬಂಧವನ್ನು ಉಲ್ಲೇಖಿಸಿ, ಧರ್ಮಸ್ಥಳ ಕ್ಷೇತ್ರದ ಎಲ್ಲಾ ಸಂಘಟನೆಗಳು ಸಕ್ರಿಯವಾಗಿ ಈ ಗೀತೋತ್ಸವದಲ್ಲಿ ಭಾಗವಹಿಸುವುದರೊಂದಿಗೆ, ಉಡುಪಿ-ಧರ್ಮಸ್ಥಳೋತ್ಸವವಾಗಿ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು. 

ವಿಶ್ವಗೀತಾ ಪರ್ಯಾಯದಲ್ಲಿ ನವೆಂಬರ್ 28ರಂದು ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಆಗಮಿಸುತ್ತಿರುವ ವಿಶ್ವ ನಾಯಕ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜೊತೆ ಜಗದೊಡೆಯ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಗೀತಾ ಪಾರಾಯಣ ಮತ್ತು ಭಜನೆ ಮಾಡುವುದರ ಮೂಲಕ ಧರ್ಮ ಜಾಗೃತಿ ಹಾಗೂ ಶ್ರೀಕೃಷ್ಣನ ಅನುಗ್ರಹ ಪಡೆಯುವಂತೆ ಕರೆಯಿತ್ತರು.

ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ನೀಡಿದರು.

ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಇಂತಹ ಬೃಹತ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದ್ದು, ದೊಡ್ಡ ಸಂಖ್ಯೆಯಲ್ಲಿ ಧರ್ಮಸ್ಥಳದ ಸಂಘಟನೆಗಳ ಭಾಗವಹಿಸುವಿಕೆಯ ಬಗ್ಗೆ ವಲಯ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಿದ್ಧಪಡಿಸುವ ಭರವಸೆಯನ್ನು ನೀಡಿದರು. 

ಬೃಹತ್ ಗೀತೋತ್ಸವ ಸಮಿತಿಯ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಜನ ಸಂಘಟನೆ ಮತ್ತು ಭಾಗವಹಿಸುವಿಕೆಯ ಮಹತ್ವವನ್ನು ತಿಳಿಸಿದರು.

ಸಭೆಯಲ್ಲಿ ಭಜನಾ ಪರಿಷತ್ತಿನ ಉಪಾಧ್ಯಕ್ಷ ಶ್ರೀ ರಾಜೇಂದ್ರ ಕುಮಾರ್, ಅಧ್ಯಕ್ಷ ಶ್ರೀ ಚಂದ್ರಶೇಖರ ಸಾಲಿಯಾನ್, ಗ್ರಾಮಾಭಿವೃದ್ಧಿಯ ಶ್ರೀ ಆನಂದ ಸುವರ್ಣ, ಶ್ರೀ ನಾಗರಾಜ್ ಶೆಟ್ಟಿ, ಗೀತಾ ತರಬೇತುದಾರರಾದ ಶ್ರೀಮತಿ ಉಷಾ ಹೆಬ್ಬಾರ್, ಶ್ರೀಮಠದ ಶ್ರೀ ಪ್ರಮೋದ್ ಸಾಗರ್, ರವೀಂದ್ರಾಚಾರ್ಯ,ಶ್ರೀ ರಮೇಶ್ ಭಟ್ ಉಪಸ್ಥಿತರಿದ್ದರು. ಶ್ರೀ ವಿಕ್ರಮ್ ಕುಂಟಾರ್ ಸ್ವಾಗತಿಸಿದರು, ಶ್ರೀ ಕೆ ವಿ ರಮಣ್ ವಂದನಾರ್ಪಣೆಗೈದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು