ಉಡುಪಿ: ಓದುವಂತೆ ಬುದ್ಧಿ ಹೇಳಿದಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಎಂಬಲ್ಲಿ ನಡೆದಿದೆ.
ಬಾಲಕಿಯನ್ನು ಬಾಲ್ಕಟ್ಟು ನಿವಾಸಿ ಮಲ್ಲಿಕಾ ಎಂಬವರ ಮಗಳು ಸಮನ್ವಿ ಎಂದು ಗುರುತಿಸಲಾಗಿದೆ. ಈಕೆ ಉಡುಪಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಡಿ.26ರಂದು ಸಂಜೆ ವೇಳೆ ಸಮನ್ವಿಗೆ ತಾಯಿ ಮುಂಬರುವ ಪರೀಕ್ಷೆಗೆ ಓದುವಂತೆ ಹೇಳಿದ್ದರು. ಆದರೂ ಸಮನ್ವಿ ಓದದೇ ಫೋನ್ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ತಾಯಿ ಆಕೆಗೆ ಬುದ್ದಿವಾದದ ಮಾತು ಹೇಳಿದ್ದರು.
ಇದೇ ಚಿಂತೆಯಲ್ಲಿ ಸಮನ್ವಿ ಮನೆಯ ಬೆಡ್ ರೂಂನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮನೆಯವರು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಸಮನ್ವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 ಕಾಮೆಂಟ್ಗಳು