‘ಸೇವಾ ಭೂಷಣ’ ಪ್ರಶಸ್ತಿಗೆ ಯು. ಶ್ರೀಧರ್ ಆಯ್ಕೆ

ಉಡುಪಿಯ ಯಕ್ಷಗಾನ ಕಲಾರಂಗವು ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುತ್ತಾ ಬಂದ ‘ಸೇವಾ ಭೂಷಣ ಪ್ರಶಸ್ತಿ’ಯನ್ನು ಈ ವರ್ಷದಿಂದ ಎಚ್. ಎನ್. ಶೃಂಗೇಶ್ವರರ ಹೆಸರನ್ನು ಸೇರಿಸಿ ಈರ್ವರ ನೆನಪಿನಲ್ಲಿ ನೀಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಎಸ್. ಗೋಪಾಲ ಕೃಷ್ಣರು ೨೭ ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿದ್ದರು. ಕಳೆದ ವರ್ಷ ನಮ್ಮನ್ನಗಲಿದ ಎಚ್. ಎನ್. ಶೃಂಗೇಶ್ವರರು ಕಾರ್ಯಕರ್ತರಾಗಿ, ಜೊತೆಕಾರ್ಯದರ್ಶಿಯಾಗಿ ೩೫ ವರ್ಷಗಳ ಕಾಲ ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾಗಿದ್ದರು. 

ಈ ವರ್ಷದ ಸೇವಾ ಭೂಷಣ ಪ್ರಶಸ್ತಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ, ಸಮಾಜ ಸೇವಕ, ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆಯಾಗಿದ್ದಾರೆ. ಇವರು ಶ್ರೀ ನಾರಾಯಣ ಗುರುಗಳ ತತ್ವೋಪದೇಶವನ್ನು ಸ್ವತಃ ಮೈಗೂಡಿಸಿಕೊಂಡು ಗುರುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನು ಉಚಿತವಾಗಿ ಹಂಚುತ್ತಾ ಅವರ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುತ್ತಾ, ಅದರೊಂದಿಗೆ ನೊಂದವರಿಗೆ, ಸಂಸ್ಥೆಗಳಿಗೆ ನೆರವು ನೀಡುತ್ತಾ ಸಮಾಜದ ಒಳಿತಿಗಾಗಿ ಸ್ಪಂಧಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. 

ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ೨೭ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಜರಗಲಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು