ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮದ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಮತ್ತು ಕುಂದಾಪುರದ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಗಿ ಮತ್ತಿತರರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ರವರನ್ನು ಭೇಟಿ ಮಾಡಿ ಗೋಡಂಬಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿದರು.
ದೇಶದಲ್ಲಿ ಗೋಡಂಬಿ ಉದ್ಯಮದ ಹಿತಾಸಕ್ತಿ ಕಾಪಾಡುವುದರಿಂದ ಗೇರುಬೀಜದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಡಲು ಸಾಧ್ಯವಿದೆ, ಆರ್ಥಿಕ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಗೊಳ್ಳಲಿದೆ, ಎಂದು ಕೇಂದ್ರ ಸಚಿವರಿಗೆ ವಿವರಿಸಿದ ನಿಯೋಗ ಭಾರತದ ಮಾರುಕಟ್ಟೆಗೆ ಹೊರದೇಶದ ಗೋಡಂಬಿ ಆಮದಿನ ಹೆಸರಿನಲ್ಲಿ ಸುಂಕ ಕಡಿತಗೊಳಿಸುವಿಕೆ, ನಿಯಮ ರಹಿತವಾಗಿ ಗೋಡಂಬಿ ಸಾಗಾಟ, ಭಾರತವು ಸೇರಿ ಅನ್ಯ ರಾಷ್ಟ್ರಗಳಲ್ಲಿ ತಿರಸ್ಕರಿಸಲ್ಪಟ್ಟ ಕಳಪೆ ಗುಣಮಟ್ಟದ ನುಚ್ಚು ಗೋಡಂಬಿಗಳನ್ನು ಪಶು ಆಹಾರ ಉತ್ಪಾದಿಸುವಿಕೆಯ ಹೆಸರಲ್ಲಿ ಸುಂಕ ವಿನಾಯಿತಿಯೊಂದಿಗೆ ಖರೀದಿಸಿ ಮಾರುಕಟ್ಟೆಯಲ್ಲಿ ಉತ್ಪಾದಿತ ಗೋಡಂಬಿಗೆ ಸಮನಾಗಿ ಮಾರಾಟ ಮಾಡಿ ನೈಜ ಉದ್ಯಮಕ್ಕೆ ಬೀಳುವ ಹೊಡೆತಗಳ ಬಗ್ಗೆ ನಿಯೋಗವು ಸಚಿವರಿಗೆ ವಿವರಿಸಿತು. ಕೆಲವೆಡೆ ನೈಜ ಗೋಡಂಬಿಯನ್ನು ಹುರಿದ ಗೋಡಂಬಿ ಎಂದು ಘೋಷಿಸಿ, ದರದ ವ್ಯತ್ಯಯ ಮತ್ತು ಸಂಶೋಧನಾ ಸಂಸ್ಥೆಗಳ ತಪಾಸಣೆಯಿಂದ ಉದ್ಯಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದ್ದು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಉದ್ಯಮವನ್ನು ಉಳಿಸಿ ಬೆಳೆಸಲು ಸಹಕರಿಸಬೇಕೆಂದು ವಿನಂತಿಸಿದರು.
ಸುದೀರ್ಘ ಚರ್ಚೆಯ ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಇನ್ನುಮುಂದೆ ಅಕ್ರಮ ಗೋಡಂಬಿ ಆಮದಿನ ಬಗ್ಗೆ ಕಟ್ಟು ನಿಟ್ಟಾಗಿ ಮಾರ್ಗಸೂಚಿ ರಚಿಸುವಂತೆ ಪಶು ಆಹಾರಕ್ಕೆ ಬೆಳೆಸುವ ಹೆಸರಲ್ಲಿ ಸುಂಕ ರಹಿತ ಗೋಡಂಬಿ ಆಮದನ್ನು ನಿಲ್ಲಿಸುವಂತೆ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಮೂಲಕ ಗುಣಮಟ್ಟವನ್ನು ತೀವ್ರ ಪರಿಶೀಲನೆಗೊಳಪಡಿಸುವಂತೆ ನಿರ್ದೇಶಿಸಿದರು. ಅಕ್ರಮ ಆಮದುಗಳನ್ನು ನಿಲ್ಲಿಸಿ ಕಾನೂನು ಚೌಕಟ್ಟಿನಲ್ಲಿ ದೇಶಿಯ ಮಾನದಂಡದಡಿ ಮಾತ್ರ ಆಮದಿಗೆ ಅವಕಾಶ ನೀಡಲು ಆದೇಶಿಸಿದರು.
ಶಾಸಕ ಕಿರಣ್ ಕೊಡ್ಗಿಯವರು ಮಾತನಾಡಿ ಗೇರು ಬೀಜ ಉದ್ಯಮ ಉಳಿದು ಬೆಳೆಯಲು ಸಹಾಯ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ವಾಣಿಜ್ಯ ಕೈಗಾರಿಕಾ ಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದರು.
ದೆಹಲಿಯ ಭವನದ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮದ ಸಂಘದ ಕಾರ್ಯದರ್ಶಿ ಎಂ. ರಾಮಕೃಷ್ಣನ್, ಶ್ರೀ ಪ್ರಕಾಶ್ ಕಲ್ಬಾವಿ, ತುಕಾರಂ ಪ್ರಭು, ಶ್ರೀ ಉಪೇಂದ್ರ ಕೆ ಮತ್ತು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಯಾದವ್, ಆರ್ಥಿಕ ಸಲಹೆಗಾರ್ತಿ ಶ್ರೀಮತಿ ಪ್ರಿಯಾ ನಾಯರ್, ಹೆಚ್ಚುವರಿ ಡಿ.ಜಿ.ಎಫ್.ಟಿ ರಾಕೇಶ್ ಕುಮಾರ್ ಮುಂತಾದವರಿದ್ದರು.

0 ಕಾಮೆಂಟ್ಗಳು