ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಉಡುಪಿ ಘಟಕ ಹಾಗೂ ಮಹಿಳಾ ವಿಭಾಗ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ ನೆನಪಿನಲ್ಲಿ ಶನಿವಾರ ಪುರಭವನದಲ್ಲಿ ನಡೆದ ದ್ವಿತೀಯ ವರ್ಷದ ತೆಂಕುತಿಟ್ಟಿನ ಸಮುದ್ರ ಮಥನ ಯಕ್ಷಗಾನ ಕಾರ್ಯಕ್ರಮ ವೇದಿಕೆಯಲ್ಲಿ ಹೈದರಾಬಾದ್ ಹೊಟೇಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ "ಯಕ್ಷಧ್ರುವ ಕಲಾ ಗೌರವಾರ್ಪಣೆ' ನೀಡಲಾಯಿತು.
ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್ ಚಾಲ್ತಿಗೆ ಬಂದು ಸುವರ್ಣ ಸಂಭ್ರಮದ ಕಾಲಘಟ್ಟದಲ್ಲಿ ಫೌಂಡೇಶನ್ ಮನವಿಯಂತೆ ಯಕ್ಷಗಾನ ಕಲಾವಿದರು ಮತ್ತು ಕುಟುಂಬದವರಿಗೆ 2750 ಕಾರ್ಡ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದೆಯೂ ಫೌಂಡೇಶನ್ ಮಾಡುವ ಆರೋಗ್ಯ ಸಂಬಂಧಿ ಯೋಜನೆಗಳಿಗೆ ಮಾಹೆ ವಿ.ವಿ. ವತಿಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ| ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
ಪ್ರಶಸ್ತಿ ಸ್ವೀಕರಿಸಿದ ಕೃಷ್ಣಮೂರ್ತಿ ಮಂಜ ಮಾತನಾಡಿ, ಕಲಾವಿದರನ್ನು ಗೌರವಿಸುವುದು ಎಂದರೆ ಕಲೆಗೆ ಗೌರವ ಸಲ್ಲಿಸಿದಂತೆಯೇ. ಪುರಾಣ, ಇತಿಹಾಸ ಮತ್ತು ಸಂಸ್ಕೃತಿಯ ಕಥೆಗಳನ್ನು ಮನಮುಟ್ಟುವ ರೀತಿಯಲ್ಲಿ ಜನರಿಗೆ ತಲುಪಿಸುವ ಅಪೂರ್ವ ಕಲೆಯೇ ಯಕ್ಷಗಾನ. ಸಂಗೀತ, ನೃತ್ಯ, ಅಭಿನಯ, ವೇಷಭೂಷಣ ಮತ್ತು ಸಾಹಿತ್ಯದ ಸಮನ್ವಯದಿಂದ ಕೂಡಿರುವ ಯಕ್ಷಗಾನವು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾಗಿದೆ. ಇಂತಹ ಸರ್ವಾಂಗಸುಂದರ ಮತ್ತು ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾವಿದರಿಗೆ ಅಗತ್ಯವಾದ ಪ್ರೋತ್ಸಾಹ, ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು. ಅನೇಕ ಯಕ್ಷಗಾನ ಕಲಾವಿದರು ಅಪಾರ ಪರಿಶ್ರಮ ಪಡುತ್ತಿದ್ದರೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಎಲ್ಲರಿಗೂ ದೊರೆಯುತ್ತಿಲ್ಲ. ಸಮಾಜವು ಕಲೆ ಮತ್ತು ಕಲಾವಿದರನ್ನು ಆದರದಿಂದ ಗೌರವಿಸಿದಾಗ ಮಾತ್ರ ಯಕ್ಷಗಾನ ಇನ್ನಷ್ಟು ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಆಗ ಕಲಾವಿದರೂ ಗೌರವಯುತ ಮತ್ತು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, ಯಕ್ಷಗಾನ ಉಳಿಯಬೇಕಾದರೆ ಕಲಾವಿದರು ತಮ್ಮನ್ನು ಸಂಪೂರ್ಣವಾಗಿ ಈ ಕಲೆಗೆ ಸಮರ್ಪಿಸಿಕೊಳ್ಳಬೇಕು. ಅದೇ ರೀತಿ ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರೂ ಸುಸಂಸ್ಕೃತರಾಗಿ ಕಲೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಬೇಸಗೆಯಲ್ಲಿ ಮೇಳಗಳಲ್ಲಿ ಕಲಾವಿದರಿಗೆ ಉದ್ಯೋಗ ಮತ್ತು ವೇತನ ದೊರೆಯುತ್ತದೆ. ಆದರೆ ಮಳೆಗಾಲದಲ್ಲಿ ಬಹುತೇಕ ಕಲಾವಿದರು ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಸೇರಿದಂತೆ ವಿವಿಧ ಉದ್ಯೋಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಿಸುತ್ತಾರೆ. ಈ ಸಂಕಷ್ಟವನ್ನು ಮನಗಂಡು ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಫೌಂಡೇಶನ್ ಸ್ಥಾಪಿಸಿ, ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸಿ ಅಗತ್ಯ ನೆರವು ಮತ್ತು ಸಹಕಾರ ನೀಡಲಾಗುತ್ತಿದೆ. ಈ ಮೂಲಕ ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಮತ್ತು ಕಲಾವಿದರ ಬದುಕಿನ ಭದ್ರತೆಗೆ ಸಂಸ್ಥೆಯು ತನ್ನದೇ ಆದ ಸಣ್ಣದಾದರೂ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ ಎಸ್. ಶೆಟ್ಟಿ, ಕೊಡವೂರು ತೋಟದಮನೆ ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ, ಮಹಿಳಾ ಘಟಕದ ಅಧ್ಯಕ್ಷೆ ನಿರೂಪಮಾ ಪ್ರಸಾದ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವಿದ್ವಾನ್ ದಾಮೋದರ ಶರ್ಮ ಬಾರಕೂರು ನಿರೂಪಿಸಿದರು.
ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಡಾ ಜಿ.ಶಂಕರ್ ಅವರನ್ನು "ಅಮೂಲ್ಯ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಹಿರಿಯ ಕಲಾವಿದ ಇಂದ್ರಾಳಿ ಪ್ರಭಾಕರ ಆಚಾರ್ಯ ಅವರಿಗೆ ಟ್ರಸ್ಟ್ ವತಿಯಿಂದ 25 ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು.

0 ಕಾಮೆಂಟ್ಗಳು