ಮಂಗಳೂರು ನಗರದ ಕುಳೂರು ಬಳಿಯ ಹೆದ್ದಾರಿಯಲ್ಲಿ ಟ್ಯಾಂಕರ್ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಹಳೆಯಂಗಡಿ ಬಳಿಯ ತೋಕೂರು ನಿವಾಸಿ ಸದಾಶಿವ ಶೆಟ್ಟಿಗಾರ್(46) ಮೃತರು. ಇವರು ವೃತ್ತಿಯಲ್ಲಿ ಇನ್ಸೂರೆನ್ಸ್ ಏಜಂಟ್ ಆಗಿದ್ದು ಮಂಗಳೂರಿಗೆ ಕಾರ್ಯ ನಿಮಿತ್ತ ಬಂದು ಸಂಜೆ ವೇಳೆಗೆ ಮನೆಯತ್ತ ತೆರಳುತ್ತಿದ್ದರು.
ಭಾರೀ ಮಳೆಯ ನಡುವೆ ಟ್ರಾಫಿಕ್ ದಟ್ಟಣೆ ಇರುವಾಗಲೇ ಕುಳೂರು ವಿಆರ್ ಎಲ್ ಕಚೇರಿ ಮುಂಭಾಗದಲ್ಲಿ ಅಪಘಾತ ನಡೆದಿದೆ.
ಸ್ಕೂಟರ್ ಸವಾರ ಟ್ಯಾಂಕರ್ ಎಡ ಬದಿಯಿಂದ ಚಲಿಸುತ್ತಿದ್ದಾಗ ತಾಗಿದ್ದೋ, ಸ್ಕೂಟರ್ ಹಿಂದಿನಿಂದಲೇ ಟ್ಯಾಂಕರ್ ಡಿಕ್ಕಿ ಆಗಿದೆಯೇ ಎನ್ನುವುದು ಪೊಲೀಸರಿಗೂ ದೃಢವಾಗಿಲ್ಲ. ಲಾರಿ ಚಾಲಕ ಮಹಮ್ಮದ್ ಅಜರುದ್ದೀನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಕೂಟರ್ ರಸ್ತೆಯಿಂದ ಹೊರಕ್ಕೆ ಎಡಬದಿಗೆ ಬಿದ್ದಿದ್ದು ಸವಾರನ ತಲೆ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಮಳೆಯಿಂದಾಗಿ ರಸ್ತೆ ಕಾಣುತ್ತಿರಲಿಲ್ಲ, ಎಡ ಬದಿಗಿದ್ದ ಸ್ಕೂಟರ್ ಕೂಡ ಕಾಣುತ್ತಿರಲಿಲ್ಲ ಎಂದು ಲಾರಿ ಚಾಲಕ ಪೊಲೀಸರಲ್ಲಿ ತಿಳಿಸಿದ್ದಾನೆ. ಬಸ್, ಟ್ಯಾಂಕರ್, ಲಾರಿ ಇನ್ನಿತರ ಯಾವುದೇ ಘನ ವಾಹನಗಳ ಎಡ ಬದಿಯಿಂದ ಓವರ್ ಟೇಕ್ ಆಗಲೀ, ಟ್ರಾಫಿಕ್ ನಲ್ಲಿ ಸಂಚರಿಸುವಾಗಲೂ ಜಾಗ್ರತೆ ಇರಬೇಕಾಗುತ್ತದೆ. ದೊಡ್ಡ ವಾಹನಗಳ ಚಾಲಕರಿಗೆ ಎಡ ಬದಿ ಇರುವ ಸಣ್ಣ ವಾಹನಗಳು ಕಾಣದೆ ಅಪಘಾತಕ್ಕೆ ಕಾರಣವಾಗುತ್ತದೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವಾಗ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.

0 ಕಾಮೆಂಟ್ಗಳು