ಇಂದ್ರಾಳಿ ರೈಲು ನಿಲ್ದಾಣ : ಮನೆಯಿಂದ ಓಡಿಹೋಗಿದ್ದ ಐವರು ಅಪ್ರಾಪ್ತ ವಯಸ್ಕ ಬಾಲಕರ ರಕ್ಷಣೆ!

ಉಡುಪಿ: ಮನೆಯಿಂದ ಓಡಿಹೋಗಿದ್ದ ಐವರು ಅಪ್ರಾಪ್ತ ವಯಸ್ಕರನ್ನು ರೈಲ್ವೇ ಟಿಕೆಟ್ ಪರೀಕ್ಷಕಿ (ಟಿಟಿಇ) ಹಾಗೂ ರೈಲ್ವೇ ರಕ್ಷಣ ಪಡೆ (ಆರ್‌ಪಿಎಫ್) ಸಿಬಂದಿಯ ಸಮಯಪ್ರಜ್ಞೆ, ಜಾಗರೂಕತೆ ಮತ್ತು ತ್ವರಿತ ಕ್ರಮದಿಂದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಗುರುವಾರ ರಕ್ಷಿಸಲಾಗಿದೆ.

ಜು.1ರಂದು ಮಂಗಳೂರು–ಮುಂಬಯಿ ಮಾರ್ಗದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾರಕೂರು ಮತ್ತು ಉಡುಪಿ ನಡುವೆ ಟಿಕೆಟ್ ತಪಾಸಣೆ ನಡೆಸುತ್ತಿದ್ದ ಟಿಟಿಇ ಸಬಿತಾ ಶೆಟ್ಟಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಐವರು ಅಪ್ರಾಪ್ತ ವಯಸ್ಕರನ್ನು ಗಮನಿಸಿದರು. ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಉಡುಪಿ ಆರ್‌ಪಿಎಫ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು.

ರೈಲು ಇಂದ್ರಾಳಿ ನಿಲ್ದಾಣ ಸಮೀಪಿಸುತ್ತಿದ್ದಂತೆ ಆರ್‌ಪಿಎಫ್ ಸಿಬಂದಿ ಮುರಳೀಧರನ್‌ ಸಾಮಾನ್ಯ ಬೋಗಿಗೆ ತೆರಳಿ ಐವರು ಬಾಲಕರನ್ನು ಸುರಕ್ಷಿತವಾಗಿ ರಕ್ಷಿಸಿ ಆರ್‌ಪಿಎಫ್ ಠಾಣೆಗೆ ಕರೆತಂದರು. ಅಲ್ಲಿ ನಡೆಸಿದ ಸಮಾಲೋಚನೆ ವೇಳೆ ಕುಟುಂಬದ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಕ್ಕಳು ಮನೆಯಿಂದ ಓಡಿ ಬಂದಿರುವುದು ಬೆಳಕಿಗೆ ಬಂದಿತು.

ಬಾಲಕರಿಗೆ ಅಗತ್ಯ ಉಪಾಹಾರ ಹಾಗೂ ಆರೈಕೆ ಒದಗಿಸಿದ ಬಳಿಕ ಅವರನ್ನು ಉಡುಪಿಯ ಮಕ್ಕಳ ಸಹಾಯ ಕೇಂದ್ರದ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲಿ ಮಕ್ಕಳಿಗೆ ಸಮಾಲೋಚನೆ, ಕುಟುಂಬದವರೊಂದಿಗೆ ಮರುಸೇರ್ಪಡೆ ಹಾಗೂ ಕಾನೂನು ಪ್ರಕ್ರಿಯೆಗಳು ನಡೆದಿವೆ.

ಬೆಂಗಳೂರು ಆರ್ಟಿ ನಗರ ನಿವಾಸಿಗಳಾದ ಬಾಲಕರಿಗೆ ದೊಡ್ಡಣಗುಡ್ಡೆ ಬಾಲಕರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ ಪೋಷಕರು ದಾಖಲೆಗಳನ್ನು ಸಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು