ಪತ್ರಿಕಾ ದಿನಾಚರಣೆಯ ಅಂಗವಾಗಿ ನಗರದ ಮೆಜೆಸ್ಟಿಕ್ನಲ್ಲಿ ಬೆಳಿಗ್ಗಯೇ ಪತ್ರಿಕಾ ವಿತರಕರ ಸಂಭ್ರಮ ಸಡಗರದಿಂದ ನಡೆಯಿತು.
ಇದೇ ಸಂದರ್ಭದಲ್ಲಿ ನ್ಯೂಸ್ ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್ ಅನ್ನು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ. ಪ್ರಭಾಕರ್, “ಪತ್ರಿಕಾ ವಿತರಕರು ಮಾಧ್ಯಮ ಸಂಸ್ಥೆಗಳ ನರನಾಡಿಗಳಿಗೆ ಆಮ್ಲಜನಕ ಇದ್ದಂತೆ. ಪ್ರತಿನಿತ್ಯ ಯಾವುದೇ ಹವಾಮಾನವನ್ನೂ ಲೆಕ್ಕಿಸದೆ ಪತ್ರಿಕೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಅವರ ಸೇವೆ ಅತ್ಯಂತ ಶ್ಲಾಘನೀಯ,” ಎಂದು ಹೇಳಿದರು.
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, “ಚಳಿ, ಮಳೆ, ಬಿಸಿಲೆನ್ನದೆ ದುಡಿಯುವ ಪತ್ರಿಕಾ ವಿತರಕರು ಮಾಧ್ಯಮ ಕ್ಷೇತ್ರದ ಬೆನ್ನೆಲುಬು. ಅವರ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು,” ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ವಿತರಕರಿಗೆ ನ್ಯಾಯ ದೊರಕಿಸಲು ಕೆ. ಶಂಭುಲಿಂಗ ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೆ.ವಿ. ಪ್ರಭಾಕರ್ ಅವರ ಸಹಕಾರದಿಂದ ಹಲವು ಸೌಲಭ್ಯಗಳು ದೊರೆತಿವೆ. ಸಂಘಟನೆ ಇದ್ದರೆ ಮಾತ್ರವೇ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಈ ಹೋರಾಟ ಸಾಬೀತುಪಡಿಸಿದೆ ಎಂದು ಹೇಳಿದರು.
ಐಎಫ್ಡಬ್ಲ್ಯೂಜೆ (IFWJ) ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, “ಪತ್ರಿಕಾ ವಿತರಕರಿಲ್ಲದೆ ಪತ್ರಿಕೆಗಳೇ ಇಲ್ಲ. ಪತ್ರಿಕಾ ವಿತರಕರು ಮಾಧ್ಯಮ ವ್ಯವಸ್ಥೆಯ ಅವಿಭಾಜ್ಯ ಅಂಗ,” ಎಂದು ಅಭಿಪ್ರಾಯಪಟ್ಟರು.
ಹುಟ್ಟುಹಬ್ಬದ ಶುಭಾಶಯ:
ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಉಪಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಸುರೇಶ್, ಸಂಗಂ, ಗೋಪಾಲ, ಜಗದೀಶ್, ದೇವರಾಜ್, ನಾಗರತ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

0 ಕಾಮೆಂಟ್ಗಳು