"ರೇಖಾ ರೂಪಂ" ಡಾ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನವು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಕಾಣಕೋಣ ಗೋವಾ ಇಲ್ಲಿನ ಇಂದಿರಾ ಕಾಂತ ಭವನ ಗ್ಯಾಲರಿಯಲ್ಲಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡಿತು.
"ಕಾವಿ ಕಲೆಯು ನಮ್ಮ ದೇಶಿಯ ಚಿತ್ರಕಲಾ ಪದ್ಧತಿಯಾಗಿದ್ದು ನಮ್ಮ ಕೊಂಕಣ ಕರಾವಳಿಯ ತೀರ ಪ್ರದೇಶದಲ್ಲಿ ಹೆಚ್ಚಿನ ಎಲ್ಲಾ ದೇವಾಲಯ ಮಠ ಮಂದಿರಗಳಲ್ಲಿ ಕಾಣಸಿಗುತ್ತದೆ. ಇತ್ತೀಚಿಗೆ ನವೀಕರಣಗೊಂಡಿರುವ ನಮ್ಮ ಪರ್ತಗಾಳಿ ಶ್ರೀ ಕ್ಷೇತ್ರದಲ್ಲಿಯೂ ಕಾವಿ ಕಲೆಯ ಮೂಲ ಪದ್ದತಿಯಂತೆ ಚಿತ್ರಗಳನ್ನು ಮರು ನಿರ್ಮಿಸಲಾಗಿದೆ. ಹಾವಂಜೆಯವರು ಸಂಪೂರ್ಣ ರಾಮಾಯಣದ ಚಿತ್ರಗಳನ್ನು ಮತ್ತು ದಶಾವತಾರದ ಚಿತ್ರಗಳನ್ನು ಕೂಡ ಮಠದಲ್ಲಿ ನಿರ್ಮಿಸಿದ್ದಾರೆ. ಈ ನಮ್ಮ ಸ್ಥಳೀಯ ಕಲೆಯನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ, ಇವರ ಕರಕಮಲದಲ್ಲಿ ಇನ್ನಷ್ಟು ಕಲಾ ಕೃತಿಗಳು ಮೂಡಿಬರಲಿ" ಎಂಬುದಾಗಿ ಆಶೀರ್ವಚನವಿತ್ತರು.
ಸುಮಾರು 13ನೇ ಶತಮಾನದಲ್ಲಿ ಬೆಳೆದಿರುವ ಈ ದೇಶಿಯ ಕಲೆ ಅಳಿವಿನ ಅಂಚಿನಲ್ಲಿದ್ದು ಕಳೆದ 23 ವರ್ಷದಿಂದಲೂ ಇದರ ಸತತ ಸಂಶೋಧನೆ ಅಧ್ಯಯನ ಸಂರಕ್ಷಣಾ ಕಾರ್ಯಗಳು ಹಾಗೂ ಕಾವಿ ಕಲಾಕೃತಿಗಳ ರಚನೆ ಮತ್ತು ಮುಂದಿನ ಪೀಳಿಗೆಗೂ ಇದನ್ನು ಕಲಿಸಿಕೊಡುತ್ತಿರುವ ಕಲಾವಿದರಾದ ಜನಾರ್ಧನ ಹಾವಂಜೆ ಮಾತನಾಡಿ "ಶ್ರೀ ಸಂಸ್ಥಾನದ ಸ್ವಾಮೀಜಿಗಳು ಕಾವಿ ಚಿತ್ರಕಲೆಯನ್ನು ಬೆಳೆಸುವುದಕ್ಕಾಗಿ ನಮ್ಮಂತಹ ಯುವ ಕಲಾವಿದರಿಗೆ ಅವಕಾಶ ಕೊಟ್ಟು ಇಲ್ಲಿ ಸಂಪೂರ್ಣ ರಾಮಾಯಣ, ದಶಾವತಾರ ಹಾಗೂ ಇನ್ನಿತರ ದೇವರ ಚಿತ್ರಗಳನ್ನ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ನಮ್ಮ ಭಾಗ್ಯವೇ ಸರಿ. ಇಲ್ಲಿ ನಿರ್ಮಿಸಿರುವ ಚಿತ್ರಗಳಿಂದಾಗಿ ಗುರುಗಳಿಂದ ಬಹಳಷ್ಟು ತಮಗೆ ಕಲಿಯಲು ಅವಕಾಶ ಲಭಿಸಿತಲ್ಲದೆ ಕಾವಿ ಕಲೆಗೆ ಸಂಬಂಧಿಸಿದಂತೆ ಸಂಸ್ಥಾನವು ದೊಡ್ಡ ಗ್ಯಾಲರಿ ಮತ್ತು ಕೇಂದ್ರ ವಾಗಿಯೂ ಗುರುತಿಸಿಕೊಂಡಿದೆ." ಎಂಬುದಾಗಿ ಹೇಳಿದರು. ಈ ಸಂದರ್ಭದಲ್ಲಿ ಪರ್ತಗಾಳಿಮಠದ ಪುರೋಹಿತರಾದ ವಿಕ್ರಮ ಭಟ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು . ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಲಾ ಪ್ರದರ್ಶನದಲ್ಲಿ ಸುಮಾರು 45 ಕಲಾ ಕೃತಿಗಳಿದ್ದು ದೇವಿಗೆ ಸಂಬಂಧಿಸಿದ ಚಿತ್ರಣಗಳು, ಗಣಪತಿಯ ವಿವಿಧ ರೂಪಗಳು , ಶ್ರೀರಾಮ ದರ್ಶನಂ ಕಾಮಧೇನು, ಅನ್ನಪೂರ್ಣ, ಶ್ರೀ ವಿಠ್ಠಲತ್ರಯರು, ದಶಾವತಾರ, ಮಂಡಲ ವಿನ್ಯಾಸಗಳು ಮೊದಲಾದ ಕಾವಿ ಚಿತ್ರಗಳು ಪ್ರದರ್ಶನದಲ್ಲಿದೆ. ಕಲಾ ಪ್ರದರ್ಶನ ಆಗಸ್ಟ್ 18ರ ತನಕ ಬೆಳಿಗ್ಗೆ 10 ರಿಂದ ಸಂಜೆ 7ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ.
