BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆರೋಗ್ಯ

ಸ್ಥೂಲಕಾಯ ಅಥವಾ ಬೊಜ್ಜುತನ ನಿಗೂಢ ಶತ್ರು ನಿಶಬ್ದ ಅಪಾಯ ~ಡಾ ರಾಜಲಕ್ಷ್ಮಿ


ಪ್ರಸಕ್ತ ದಿನಗಳಲ್ಲಿನ ಅತಿ ದೊಡ್ಡ ಸಾಂಕ್ರಾಮಿಕ ಸ್ಥೂಲಕಾಯ ಅಥವಾ ಬೊಜ್ಜುತನ. ಬಾಲ್ಯಾವಸ್ಥೆಯಿಂದ ಆರಂಭಗೊಂಡು ಹಿರಿಯ ನಾಗರಿಕರವರೆಗೂ ಹೆಚ್ಚಾಗಿ ಕಂಡುಬರುತ್ತಿರುವ ದೈಹಿಕ ಸಮಸ್ಯೆ. ಶರೀರದಲ್ಲಿ ಅತಿಯಾದ ಕೊಬ್ಬು ಶೇಖರಣೆಯಾಗುವುದರಿಂದ ಸ್ಥೂಲಕಾಯ ಕಂಡುಬರುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಬೊಜ್ಜುತನ ಬಾಲ್ಯದಲ್ಲಿ 8.4% ಆಗಿದ್ದರೆ 12.4% ಮಕ್ಕಳು ಅಧಿಕ ತೂಕ ಹೊಂದಿದವರಾಗಿದ್ದಾರೆ. ಹದಿಹರೆಯದಲ್ಲಿ ಬೊಜ್ಜುತನದ ಪ್ರಮಾಣ 17% ಹುಡುಗರಲ್ಲಿ 6.9 % ಹುಡುಗಿಯರಲ್ಲಿ 4.2% ಸ್ಥೂಲಕಾಯ ಕಂಡುಬರುತ್ತಿದೆ.


 ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣ ಪ್ರದೇಶದಲ್ಲಿ ಅತಿ ತೂಕ ಹಾಗೂ ಸ್ಥೂಲಕಾಯದ ಪ್ರಮಾಣ ಹೆಚ್ಚಿದೆ. NFHS-5 ರ ವರದಿಗಳ ಪ್ರಕಾರ 24 ಪ್ರತಿಶತ ಭಾರತೀಯ ಮಹಿಳೆಯರು ಹಾಗೂ 23 ಪ್ರತಿಶತ ಭಾರತೀಯ ಪುರುಷರು ಅತಿ ತೂಕ ಹೊಂದಿದವರಾಗಿದ್ದಾರೆ. ಭಾರತೀಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೊಟ್ಟೆಯ ಭಾಗದಲ್ಲಿನ ಬೊಜ್ಜು ಅಥವಾ ಕೊಬ್ಬಿನ ಶೇಖರಣೆ ಆಘಾತಕಾರಿಯಾಗಿದೆ. ಅತಿಯಾದ ತೂಕ ಹಲವು ದೈಹಿಕ ಸಮಸ್ಯೆ ಹಾಗೂ ಕಾಯಿಲೆಗಳಿಗೆ ಮೂಲ ಕಾರಣವಾಗಿರುವುದರಿಂದ ಹೆಚ್ಚುತ್ತಿರುವ ಅಂಕಿ ಅಂಶಗಳು ಕಳವಳಕಾರಿ ಬೆಳವಣಿಗೆಗಳಾಗಿವೆ



ತೂಕ ಹೆಚ್ಚಾಗಲು ಕಾರಣಗಳೇನು?

 1 ಪ್ರಸಕ್ತ ಜೀವನಶೈಲಿ, ಚಟುವಟಿಕೆ ಇಲ್ಲದ ದಿನಚರಿ, ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕರಣ ಮತ್ತು ಅನಾರೋಗ್ಯಕರ ಆಹಾರ ಸೇವನೆ  

 2 ಉತ್ತಮ ದರ್ಜೆಗೆ ಏರಿರುವ ಸಾಮಾಜಿಕ ಆರ್ಥಿಕ ಸ್ಥಿತಿ, ಆರ್ಥಿಕ ಸಬಲೀಕರಣ 

 3 ಹೆಚ್ಚು ಕ್ಯಾಲರಿ, ಕಡಿಮೆ ಪೌಷ್ಟಿಕಾಂಶಗಳಿರುವ ಆಹಾರ ಸೇವನೆ

 4 ಅಗತ್ಯಕ್ಕಿಂತ ಅಧಿಕವಾದ ಆಹಾರ ಸೇವನೆ ಉದಾಹರಣೆಗಾಗಿ ಅತಿ ಸಿಹಿ ಇರುವ ಶಕ್ತಿವರ್ಧಕ ಪಾನೀಯಗಳು, ಸಿಹಿ ತಿಂಡಿಗಳು, ಚಾಕ್ಲೇಟ್ ಬಿಸ್ಕೆಟ್ ಮುಂತಾದವುಗಳು 

5 ಸುಲಭದಲ್ಲಿ ಕೈಗೆಟಕುವ ಜಂಕ್ ಆಹಾರ ಪದಾರ್ಥಗಳು 

 6 ವೇಗವಾಗಿ ತಿನ್ನುವುದು. ತಿನ್ನುವ ಸಮಯದಲ್ಲಿ ಉದ್ವಿಗ್ನ ಮನಸ್ಥಿತಿ. ಟಿವಿ ಮೊಬೈಲ್ ವೀಕ್ಷಿಸುತ್ತಾ ಆಹಾರ ಸೇವನೆ 

 7 ಸದಾ ಕುಳಿತುಕೊಂಡೆ ಇರುವ ನೌಕರಿ 

 8 ವ್ಯಾಯಮರಹಿತ ದಿನಚರಿ  

 9 ಮಾನಸಿಕ ನೆಮ್ಮದಿಯ ಕೊರತೆ

 10 ನಿದ್ದೆಯ ಕೊರತೆ 

 11 ರಸದೂತಗಳಲ್ಲಿನ ವ್ಯತ್ಯಯಗಳು PCOS, ಥೈರಾಯಿಡ್ ಸಮಸ್ಯೆಗಳು 

 12 ಪರಂಪರಾಗತವಾಗಿ ಬಂದಿರುವ ಸ್ಥೂಲಕಾಯ 

 13 ಕೆಲವೊಂದು ಔಷಧಿಗಳ ಸೇವನೆಯಿಂದಾಗಿ ತೂಕ ಹೆಚ್ಚಾಗುವಿಕೆ ( ಮಾನಸಿಕ ಸಮಸ್ಯೆಗಳ ಔಷಧಿಗಳು, ಸ್ಥಿರಾಯ್ಡ್ಗಳು, ಅತಿ ಹೆಚ್ಚು ಹಾರ್ಮೋನುಗಳನ್ನು ಒಳಗೊಂಡ ಗರ್ಭ ನಿರೋಧಕ ಗುಳಿಗೆಗಳು )

 14 ಮಾನಸಿಕ ಒತ್ತಡ ಆತಂಕ ಖಿನ್ನತೆ ಆತ್ಮವಿಶ್ವಾಸದ ಕೊರತೆ ಹಾಗೂ ಕೀಳರಿಮೆ 

 ಇವೇ ಮುಂತಾದ ಹಲವು ಕಾರಣಗಳಿಂದ ದೇಹದ ತೂಕವು ಹೆಚ್ಚಾಗುತ್ತದೆ

ಸ್ಥೂಲಕಾಯದ ನಿರ್ಧಾರ ಹೇಗೆ? 

ತೂಕವನ್ನು ದೇಹದ ಎತ್ತರಕ್ಕೆ ಅನುಗುಣವಾಗಿ ಸ್ಥೂಲಕಾಯವನ್ನು ನಿರ್ಧರಿಸಲಾಗುತ್ತದೆ 

BMI= ದೇಹದ ತೂಕ ಕಿ. ಗ್ರಾಂಗಳಲ್ಲಿ (WEIGHT IN KGS)/ ಎತ್ತರ2 ಸೆ.ಮೀಗಳಲ್ಲಿ (square of height in centimetres)

<18.5 ಕಡಿಮೆ ತೂಕ 

18.5-24.9 ಸಹಜ/ಸರಿಯಾದ ತೂಕ 

25.0-29.9 ಅತಿ ತೂಕ 

 >30 ಸ್ಥೂಲಕಾಯ/ಬೊಜ್ಜುತನ

ಸೊಂಟದ ಸುತ್ತಳತೆಯೂ ಸ್ಥೂಲಕಾಯವನ್ನು ನಿರ್ಧರಿಸುವಲ್ಲಿ ಹಾಗೂ ಉಪಶಮನಕಾರಿ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಸ್ಥೂಲಕಾಯ ದಿಂದಾಗುವ ಸಮಸ್ಯೆಗಳೇನು ?

 ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯಾಘಾತ 

 ಅತಿಯಾದ ಕೆಟ್ಟ ಕೊಬ್ಬಿನಂಶ LDL ಕೊಲೆಸ್ಟ್ರಾಲ್ ಶೇಖರಣೆ 

 Type 2 ಮಧುಮೇಹ 

 ಗಂಟು ನೋವು, ಮೂಳೆ ಸವೆತ ಹಾಗೂ ಆರ್ಥ್ರೈಟಿಸ್ 

 ನಿದ್ದೆಗೆ ತೊಂದರೆ, ಗೊರಕೆ, ನಿದ್ದೆಯಲ್ಲಿ ಉಸಿರು ಕಟ್ಟುವಿಕೆ (Sleep apnoea)

 ಮಾನಸಿಕ ಖಿನ್ನತೆ, ಕೀಳರಿಮೆ, ಏಕಾಂಗಿತನ 

 (ಸಮಾಜದಲ್ಲಿ ಹೆಚ್ಚು ತೂಕದವರನ್ನು ಕೀಳಾಗಿ ಕಂಡು , ಅಪಹಾಸ್ಯ ಮಾಡುವುದರಿಂದ Body Shaming)

 ಅಧಿಕ ತೂಕ ಗರ್ಭಕೋಶ, ಜಠರ, ಕರುಳು ಹಾಗೂ ಸ್ತನ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು 

 ಯಕೃತ್ತಿನ ತೊಂದರೆಗಳು ಕೊಬ್ಬಿನಂಶ ಯಕೃತ್ ನಲ್ಲಿ ಶೇಖರಣೆಯಾಗಿ fatty liver, non alcoholic liver diseases 

 ಮೂತ್ರಪಿಂಡಗಳ ಕಾಯಿಲೆ 

 ಸಂತಾನ ಹೀನತೆ ನಿಮಿರು ದೌರ್ಬಲ್ಯ 

 ಗರ್ಭಿಣಿಯರಲ್ಲಿ ಮಧುಮೇಹ ಅಧಿಕ ರಕ್ತದೊತ್ತಡ 

 ಮೆದುಳಿನ ಆಘಾತ ಪಾಶ್ವ ವಾಯು (Stroke)

 ಅಧಿಕ ಬೆವರುವಿಕೆ ಎದುಸಿರು 

 ದಿನನಿತ್ಯದ ಶಾರೀರಿಕ ಚಟುವಟಿಕೆಗಳನ್ನು ಮಾಡುವಾಗ ತೊಂದರೆಗಳು, ಸುಸ್ತು, ಆಯಾಸ 

 ಕೆಳ ಬೆನ್ನು ನೋವು 

 ಅಸ್ತಮಾ 

 ಚಯಾಪಚಯದ ಸಮಸ್ಯೆಗಳು (metabolic syndromes)

 ಅಸಿಡಿಟಿ ಗ್ಯಾಸ್ಟ್ರಿಕ್ (GERD) ಸಮಸ್ಯೆಗಳು 

 ಪಿತ್ತಕೋಶದ ಕಲ್ಲುಗಳು

 ಹೀಗೆ ಬೊಜ್ಜುತನದಿಂದಾಗಿ ಹಲವಾರು ದೈಹಿಕ ಸಮಸ್ಯೆಗಳು ಮತ್ತು ಕಾಯಿಲೆಗಳು ಎದುರಾಗುತ್ತವೆ. ಬೊಜ್ಜುತನ ಮನುಷ್ಯನ ಜೀವಿತಾವಧಿಯನ್ನು ಮೂರರಿಂದ ಹತ್ತು ವರ್ಷಗಳಷ್ಟು ಕಡಿತಗೊಳಿಸುತ್ತದೆ.

ಬೊಜ್ಜು ತನವನ್ನು ತಡೆಗಟ್ಟುವುದು ಹೇಗೆ

ಸಮತೋಲಿತ ಪೌಷ್ಟಿಕ ಆಹಾರ ಸೇವನೆ ತೂಕ ನಿರ್ವಹಣೆಯಲ್ಲಿ ಮೊದಲ ಹೆಜ್ಜೆ ಕ್ಯಾಲರಿ ಕಡಿಮೆ ಇರುವ ನಾರಿನಂಶ ಅಧಿಕವಿರುವ ಹಸಿರು ಸೊಪ್ಪು ತರಕಾರಿಗಳನ್ನು ಅಧಿಕವಾಗಿ ಸೇವಿಸುವುದರಿಂದ ಜಠರದ ಹಸಿವು ಬೇಗನೆ ತೃಪ್ತಿಯಾಗುತ್ತದೆ ಊಟದ ಪ್ರಾರಂಭದಲ್ಲಿ ಇವುಗಳನ್ನು ಸೇವಿಸುವುದರಿಂದ ಬೇಗನೆ ಹೊಟ್ಟೆ ತುಂಬಿದಂತೆ ಎನಿಸಿ , ಕಡಿಮೆ ಆಹಾರ ಸೇವನೆ ಆಗುತ್ತದೆ ಸತ್ವಯುತ ಆಹಾರವನ್ನು ಭಾಗ ನಿಯಂತ್ರಣ( portion control) ಮಾಡಿಕೊಂಡು ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ ಜಂಕ್ ಆಹಾರ ಅತಿ ಸಿಹಿ ಜಿಡ್ಡು ಬರಿತ ತ್ವರಿತ ಆಹಾರ ಹಾಗೆಯೇ ಸಂಸ್ಕರಿತ ಆಹಾರವನ್ನು ತ್ಯಜಿಸುವುದು ಉತ್ತಮ. ಕೈಗಳನ್ನು ಬಳಸಿ ಊಟ ಮಾಡಿ ನಿಧಾನವಾಗಿ ಆಹಾರವನ್ನು ಜಗಿಯುತ್ತ ಆಹಾರ ಸೇವನೆ ಮಾಡಿದಾಗ ತೂಕ ಹೆಚ್ಚಾಗುವುದಿಲ್ಲ 

ಪ್ರತಿದಿನವೂ 30 ನಿಮಿಷಗಳಂತೆ ವಾರಕ್ಕೆ 150 ನಿಮಿಷದ ವ್ಯಾಯಾಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ ನಡಿಗೆ, ಏರೋಬಿಕ್ ವ್ಯಾಯಾಮ, ಜಾಗಿಂಗ್, ಯಾವುದೇ ಆಟಗಳು, ಯೋಗಭ್ಯಾಸ, ಈಜು,ಝು0ಬಾ ಇತ್ಯಾದಿ ಯಾವುದೇ ವಿಧದ ವ್ಯಾಯಾಮವನ್ನು ದಿನಚರಿಯಲ್ಲಿ ರೂಡಿಸಿಕೊಳ್ಳುವುದು ಉತ್ತಮ 

 ಆರರಿಂದ ಎಂಟು ಗಂಟೆಗಳ ಆರಾಮದಾಯಕ ನಿದ್ದೆ ಜೊತೆಗೆ ಒತ್ತಡರಹಿತ ಜೀವನ ತೂಕವನ್ನು ನಿಯಂತ್ರಣದಲ್ಲಿರುತ್ತದೆ 

 ಯಾವಾಗಲೂ ಚಲಿಸುತ್ತಿರುವುದರಿಂದ ತೂಕವನ್ನು ಕಾಪಾಡಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಸದಾ ಕುಳಿತುಕೊಳ್ಳುವುದು ದೂಮಪಾನದಷ್ಟೇ ಹಾನಿಕಾರಕ ಎನ್ನಲಾಗುತ್ತಿದೆ 

 ತೂಕ ಹೆಚ್ಚಾಗುತ್ತಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅವಶ್ಯಕ

ಬೊಜ್ಜುತನಕ್ಕೆ ಚಿಕಿತ್ಸೆ ಇದೆಯೇ 

ಪ್ರತಿಯೊಬ್ಬ ಮನುಷ್ಯನ ದೇಹದ ತೂಕ ಹೆಚ್ಚಾಗಲು ಕಾರಣ ವಿಭಿನ್ನವಾಗಿರುವುದರಿಂದ ಚಿಕಿತ್ಸೆಯು ಬೇರೆ ಬೇರೆ ತೆರನಾಗಿರುತ್ತದೆ ಜೀವನ ಶೈಲಿಯಲ್ಲಿನ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸ್ಥೂಲಕಾಯದವರಿಗೆ ಔಷದೋಪಚಾರವು ಅಗತ್ಯ. ದೈಹಿಕ ತಪಾಸಣೆ ನಡೆಸಿ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆಗಳು, ಕೊಬ್ಬಿನಲ್ಲಿನ (ಕೊಲೆಸ್ಟ್ರಾಲ್ ) ವ್ಯತ್ಯಾಸಗಳು ಮುಂತಾದವುಗಳನ್ನು ಪತ್ತೆ ಹಚ್ಚಿ ತಜ್ಞ ವೈದ್ಯರಿಂದ ಸಲಹೆ ಹಾಗೂ ಔಷಧಿಯನ್ನು ಪಡೆದುಕೊಳ್ಳುವುದು ಸೂಕ್ತ. ಮಾನಸಿಕ ಆರೋಗ್ಯಕ್ಕಾಗಿ ಆಪ್ತಸಮಾಲೋಚನೆ ನಡವಳಿಕೆ ಚಿಕಿತ್ಸೆಯು ಅವಶ್ಯಕ.


ಬೊಜ್ಜುತನದ ನಿವಾರಣೆಗಾಗಿ ಅಂಗೀಕೃತ ಔಷಧಿಗಳಿದ್ದು, ಸೂಕ್ತ ತಜ್ಞರ ಸಲಹೆ ಮೇರೆಗೆ ಉಪಯೋಗಿಸುವುದು ಶ್ರೇಯಕರ Orlistat, ozempic ಮುಂತಾದ ಗುಳಿಗೆಗಳನ್ನು ವೈದ್ಯರ ಸಲಹೆ ಇಲ್ಲದೆ ಔಷಧಿ ಅಂಗಡಿಯಿಂದ ತಾವೇ ಖರೀದಿಸಿ ಸೇವಿಸುವುದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು 


ಅತಿಯಾದ ತೂಕದ ನಿವಾರಣೆಗಾಗಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರಿಕ್ ಬ್ಯಾಂಡಿಂಗ್, ಗ್ಯಾಸ್ಟ್ರಿಕ್ ಬೈಪಾಸ್, ಲೈಪೋ ಸಕ್ಷನ್ ಮುಂತಾದ ಶಸ್ತ್ರ ಚಿಕಿತ್ಸೆಗಳು ಚಾಲ್ತಿಯಲ್ಲಿದ್ದು ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಪರಿಣಿತ ವೈದ್ಯರಿಂದಲೇ ಮಾಡಿಸಿಕೊಳ್ಳಬೇಕು


ತೂಕ ನಿರ್ವಹಣೆಯಲ್ಲಿ ತಕ್ಷಣದ ಫಲಿತಾಂಶಕ್ಕಾಗಿ ಚಿಕ್ಕದಾರಿ ಹಿಡಿಯದಿರಿ ಕಣ್ಮನ ಸೆಳೆಯುವ ಜಾಹೀರಾತಿನಿಂದ ಆಕರ್ಷಿತರಾಗಿ, *ಹರ್ಬಲ್, ಗಿಡಮೂಲಿಕೆ ಔಷಧ, ನೈಸರ್ಗಿಕ* ಎಂಬ ಪದಗಳಿಗೆ ಮಾರುಹೋಗಿ ತ್ವರಿತವಾಗಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾತ್ರೆ/ ಔಷಧಿಗಳನ್ನು ಸೇವಿಸುವ ಮೊದಲು ಯೋಚಿಸಿ ಅವುಗಳು ಯಕೃತ್ ಮೂತ್ರಪಿಂಡಗಳಿಗೆ ಹಾನಿಯನ್ನು ಉಂಟುಮಾಡಬಹುದು. ವೈದ್ಯರ ಸಲಹೆ ವಿನಃ ಯಾವುದೇ ತೂಕ ಹೆಚ್ಚಿಸುವ ಅಥವಾ ಇಳಿಸುವ ಔಷಧಿಗಳನ್ನು ಬಳಸಬೇಡಿ. 


ಆರೋಗ್ಯವಂತ ಬದುಕಿಗೆ ತೂಕದ ನಿಯಂತ್ರಣ ಅತಿ ಅಗತ್ಯ. ತಿನ್ನುವ ಮೊದಲು ಆರೋಗ್ಯದ ಕುರಿತು ಯೋಚಿಸಿ. ವ್ಯಾಯಾಮ ತೂಕ ನಿರ್ವಹಣೆಗೆ ಉತ್ತಮ ಔಷದವೆಂದು ನೆನಪಿರಲಿ. ತೂಕ ಕಡಿಮೆ ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಸ್ಥೂಲ ಕಾಯದಿಂದ ದೂರ ಸರಿದು ಆರೋಗ್ಯಯುಕ್ತರಾಗಿ ಬಾಳಿರಿ.

~ಡಾ ರಾಜಲಕ್ಷ್ಮಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು, ಸದಸ್ಯರು, ಸಾಮಾಜಿಕ ಆರೋಗ್ಯ ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕಾರ್ಯದರ್ಶಿ, ಸಾಮಾಜಿಕ ಆರೋಗ್ಯ ಅರಿವು ಸಮಿತಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಕರ್ನಾಟಕ ರಾಜ್ಯ ಶಾಖೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!