Header Ads Widget

'ಚೋಮನ ದುಡಿ' ಕಾದಂಬರಿಯಲ್ಲಿ ದಲಿತರ ಬದುಕಿನ ಬಗ್ಗೆ ಬೆಳಕು ಚೆಲ್ಲಿದ್ದಾರೆ~ ಪ್ರೊ.ಬಿ.ಎ.ವಿವೇಕ ರೈ

ಸುಮಾರು 40ರ ದಶಕದಲ್ಲಿಯೇ ದಲಿತ ಕೇರಿಗಳಿಗೆ ತೆರಳಿ ದಲಿತರ ಮನೆ‌ ಮನೆಗಳಿಗೆ ಹೋಗಿ ಸ್ವತಃ ಆ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿದ್ದ  ಶಿವರಾಮ ಕಾರಂತರು 'ಚೋಮನ ದುಡಿ' ಕಾದಂಬರಿಯಲ್ಲಿ ದಲಿತರ ಬದುಕಿನ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ವಿಶ್ರಾಂತ ಉಪ‌ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.​ 



ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಶನಿವಾರ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ವಿದ್ಯಾಲಯದ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾರಂತ ಜನ್ಮ ದಿನಾಚರಣೆ ಅಂಗವಾಗಿ ನೀಡಲಾದ ಟ್ರಸ್ಟ್‌ನ ಚೊಚ್ಚಲ ಡಾ.ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ‌ ಮಾತನಾಡಿದರು.

ನಿರಂತರ ಓದಿನ ಮೂಲಕ ವಿಷಯ ಗ್ರಹಣ, ಪ್ರವಾಸದ ಮೂಲಕ ಸಂಸ್ಕೃತಿ- ಸಂಪ್ರದಾಯದ ಅರಿವು ಮತ್ತು ಪ್ರಯೋಗಗಳ ಮೂಲಕ ಹೊಸತನ್ನು ಅನ್ವೇಷಿಸಿದ್ದ ಕಾರಂತರು ಅವೆಲ್ಲವನ್ನೂ ತಮ್ಮ ಕಾದಂ ಬರಿಗಳಲ್ಲಿ ಮೂಡಿಸಿದ್ದಾರೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರಂತರದು ಶತಮಾನಕ್ಕೆ ಸಾಕ್ಷಿಯಾಗಿ ನಿಲ್ಲುವ ವ್ಯಕ್ತಿತ್ವ. ಅವರ ಬಹುಮುಖ ವ್ಯಕ್ತಿತ್ವವನ್ನು ಕಲಾವಿದ ಕೆ.ಕೆ.ಹೆಬ್ಬಾರ್ ರೇಖಾ ಚಿತ್ರದ ಮೂಲಕ ತೆರೆದಿಟ್ಟಿದ್ದಾರೆ. ಕಾರಂತರಲ್ಲಿದ್ದ ಪರಿಸರ ಪ್ರೇಮ, ಸಾಹಿತ್ಯ ಕೃಷಿ, ಯಕ್ಷಗಾನದಂಥ ಕಲೆಯ ಅಭಿರುಚಿ, ಗಟ್ಟಿ ಧ್ವನಿಯ ಮೂಲಕ ಎಚ್ಚರಿಸುವ ಗಡಸುತನ ಎಲ್ಲವನ್ನೂ ಆ ರೇಖಾಚಿತ್ರ‌ ಪ್ರತಿಧ್ವನಿಸುತ್ತದೆ. ಟೀಕೆ ಟಿಪ್ಪಣಿಗಳಿಗೆ ಕುಗ್ಗದೆ, ಪ್ರಶಂಸೆಗಳಿಗೆ ಹಿಗ್ಗದೇ ತನ್ನತನವನ್ನೇ ನೆಚ್ಚಿಕೊಂಡಿದ್ದ ಕಾರಂತರು ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನೂ ಸಂಸದ ಕೋಟ ಸ್ಮರಿಸಿದರು.



ವಿಮರ್ಶಕ ಡಾ.ಎಸ್‌. ಆರ್.ವಿಜಯ ಶಂಕರ್ ವಿಶೇಷ ಉಪನ್ಯಾಸ ನೀಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಮಂಗಳೂರು ವಿ.ವಿ. ಕಾರಂತ ಅಧ್ಯಯನ ಪೀಠದ ಪ್ರೊ.ನಾಗಪ್ಪ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ ಕಾಂಚನ್, ಕಾರಂತ ಟ್ರಸ್ಟ್ ಸದಸ್ಯರಾದ ಸತೀಶ್ ಕೊಡವೂರು, ಸಂತೋಷ ನಾಯಕ್ ಪಟ್ಲ, ಬಿ.ಎಂ. ಶರೀಫ್ ಹೂಡೆ, ಡಾ.ಭಾರತಿ ಮರವಂತೆ, ಮಂಚಿ ರಮೇಶ್, ನೀಲಾವರ ಸುರೇಂದ್ರ ಅಡಿಗ  ಮೊದಲಾದವರಿದ್ದರು.


ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ಸದಸ್ಯ ಡಾ.ಪ್ರಸಾದ ರಾವ್ ಸನ್ಮಾನಪತ್ರ ವಾಚಿಸಿದರು. ಈ ಸಂದರ್ಭದಲ್ಲಿ ಹಿರಿಯ ಲೇಖಕಿ ಡಾ.ರೇಖಾ ಬನ್ನಾಡಿ, ಜಾನಪದ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಯಕ್ಷಗಾನ‌ ಕಲಾವಿದ ಶೇಖ್ ಮಹಮ್ಮದ್ ಗೌಸ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಬಳಿಕ ನಿರ್ದಿಗಂತ ಪ್ರಸ್ತುತಿಯಲ್ಲಿ ಕಾರಂತರ ಕಾದಂಬರಿ ಆಧರಿತ ನಾಟಕ 'ಮೈಮನಗಳ ಸುಳಿಯಲ್ಲಿ' ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು