ಕರ್ನಾಟಕ ರಾಜ್ಯದ, ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ ಭೂಸ್ವಾಧೀನ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಇದರಿಂದ ಎನ್.ಹೆಚ್ ಕಾಮಗಾರಿಯು ವಿಳಂಬವಾಗುತ್ತಿದೆ. ಸಂಸದನಾಗಿ ನಾನು ಕನಿಷ್ಠ 8 ರಿಂದ 10 ಬಾರಿ ಸಭೆ ನಡೆಸಿದರೂ ಭೂಸ್ವಾಧೀನ ಗೊಂದಲ ಪರಿಹಾರವಾಗಿಲ್ಲ. ಆದ್ದರಿಂದ, ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಮಾರ್ಗದರ್ಶನ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 377 ರಲ್ಲಿ ಲೋಕಸಭೆಗೆ ಪ್ರಸ್ತಾಪನೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 173 ಮೂಗುತಿಹಳ್ಳಿಯಿಂದ ಮೂಡಿಗೆರೆಯವರೆಗೆ 26 ಕಿ.ಮೀ ವಿರಸ್ತಾರವಿದ್ದು, ಇದರ ಟೆಕ್ನಿಕಲ್ ಬಿಡ್ ಓಪನ್ ಆಗಿದ್ದು, ಭೂಮಿ ನೀಡಿದ 262 ರೈತರ ಪೈಕಿ ಬಹುತೇಕ ಮಂದಿಗೆ ಹಣ ಪಾವತಿಯೇ ಆಗಿಲ್ಲ. ಚಿಕ್ಕಮಗಳೂರು ಜಿಲ್ಲಾಡಳಿತ, ಅದರಲ್ಲೂ ಅರಣ್ಯ ಇಲಾಖೆ ಒಂದನ್ನೊಂದು ತೋರಿಸಿ ವಿಳಂಬ ಮಾಡುತ್ತಿವೆ. ಚಿಕ್ಕಮಗಳೂರು ಬೇಲೂರು ಎನ್.ಹೆಚ್ 373, 26 ಕಿ.ಮೀ ಭೂಸ್ವಾಧೀನದ ಪ್ರಕ್ರಿಯೆಗಳೇ ಆರಂಭವಾಗಿಲ್ಲ. ಮಾಳ, ಎಸ್. ಕೆ ಬಾರ್ಡರ್ ನಿಂದ ಕೆರೆಕಟ್ಟೆ, ತನಿಗೋಡು ತನಕ ಎನ್.ಹೆಚ್ 169, 29 ಕಿ.ಮೀ ಉದ್ದದ ರಸ್ತೆ 1999 ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಅರಣ್ಯ ಪ್ರದೇಶ ಹಾದು ಹೋಗುವುದರಿಂದ ಬದಲಿ ಭೂಮಿ ಚಿಕ್ಕಮಗಳೂರು ಜಿಲ್ಲಾಡಳಿತ ಅರಣ್ಯ ಇಲಾಖೆ ನೀಡಬೇಕಾಗಿದ್ದು, ಇಲ್ಲಿಯವರೆಗೆ ಭೂ ಹಂಚಿಕೆಯಾಗಿಲ್ಲ.
ಈ ಎಲ್ಲಾ ಕಾರಣಗಳಿಂದ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿದೆ.
ರೈತರು ಭೂ ದಾಖಲೆಗಳನ್ನು ಕೊಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದು, ವಾಸ್ತವಿಕವಾಗಿ ರೈತರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನುಳಿದು ಇತರೆಲ್ಲ ಭೂ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಇರುವುದರಿಂದ ರೈತರು ದಾಖಲೆ ಕೊಡಲಿಲ್ಲ ಎನ್ನುವುದು ಸರಿಯಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ನಿಯಮ 377 ರಡಿ ಲೋಕಸಭೆಯಲ್ಲಿ ಪ್ರಸ್ತಾಪ ಮಂಡಿಸಿದ ಸಂಸದ ಕೋಟ, ಕೇಂದ್ರ ಭೂ ಸಾರಿಗೆ ಇಲಾಖೆ ರಾಜ್ಯದೊಡನೆ ಸಂಪರ್ಕ ಮಾಡಿ ಕೂಡಲೇ ರಾಷ್ಟ್ರೀಯ ಹೆದ್ದಾರಿಗಳಿಗೆ ಭೂಸ್ವಾಧೀನ ಮಾಡಿಕೊಡಲು ಕ್ರಮ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

0 ಕಾಮೆಂಟ್ಗಳು