ಆರುವತ್ತರ ಸಂಭ್ರಮದಲ್ಲಿ ಇರುವ ರಂಗಭೂಮಿ (ರಿ.) ಉಡುಪಿಯು ಸಂಸ್ಥೆಯ ಸ್ಥಾಪನೆಗೆ ಓರ್ವ ಮುಖ್ಕ ಕಾರಣಕರ್ತರಾಗಿ, ಸ್ಥಾಪಕ ಪ್ರಧಾನ ಕಾರ್ಯದರ್ಶಿಯಗಿ, ಅಧ್ಯಕ್ಷರಾಗಿ 45 ವರ್ಷಗಳ ಕಾಲ "ರಂಗಭೂಮಿ" ಯನ್ನು ಕಟ್ಟಿ ಬೆಳೆಸಿದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥ ಎಪ್ರಿಲ್ 30 ಗುರುವಾರ ಹಾಗೂ ಮೇ 1 ಶುಕ್ರವಾರದಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ " ರಂಗಭೂಮಿ ಆನಂದೋತ್ಸವ" ನಡೆಸಲಿದೆ.
ಎಪ್ರಿಲ್ 30 ರಂದು ಉಡುಪಿಯ ಮಾನ್ಯ ಶಾಸಕರಾದ ಶ್ರೀ ಯಶ್ಪಾಲ್ ಎ ಸುವರ್ಣ ರವರು ರಂಗಭೂಮಿ ಆನಂದೋತ್ಸವವನ್ನು ಉದ್ಘಾಟಿಸಲಿದ್ದು , ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಹಾಗೂ ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ ಆದ ಶ್ರೀ ರಮೇಶ್ ವೈದ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ನಂತರ ರಂಗಭೂಮಿ ಸಂಸ್ಥೆಯ ಕಲಾವಿದರಿಂದ " ಸಂವೇದನೆ" ಎಂಬ ನೂತನ ನಾಟಕವು ಶ್ರೀಪಾದ ಹೆಗಡೆ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಮೇ 1 ರಂದು ಆನಂದೋತ್ಸವದ ಎರಡನೇ ದಿನದಂದು ಉಡುಪಿಯ ಪ್ರಸಿದ್ದ ಸಾಯಿ ರಾಧಾ ಸಮೂಹ ಸಂಸ್ಥೆಯ ಎಂ. ಡಿ ಆಗಿರುವ ಶ್ರೀ ಮನೋಹರ ಎಸ್. ಶೆಟ್ಟಿಯವರನ್ನು
ನಾಡಿನ ಆರೋಗ್ಯ, ಸಾಮಾಜಿಕ , ಧಾರ್ಮಿಕ, ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ "ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕ್ರತಿ ಸಾಧಕ ಪ್ರಶಸ್ತಿ" ಯನ್ನು ನೀಡಿ ಅಂದು ಗೌರವಿಸಲಾಗುವುದು.
ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ| ಹೆಚ್. ಎಸ್. ಬಲ್ಲಾಳರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಮತ್ತು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ , ಯುಕೋ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಶ್ರೀ ಗೋಪಾಲ ಜಿ.ಪಿ. ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು . ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಉಪಸ್ಥಿತರಿರುವ ಈ ಸಭಾ ಕಾರ್ಯಕ್ರಮದ ನಂತರ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗ ಸಮೂಹ (ರಿ.) ಸಂಸ್ಥೆಯ ಕಲಾವಿದರಿಂದ ವಸಂತಸೇನೆ ( ಭಗವದಜ್ಜುಕೀಯ) ನಾಟಕವು ಶ್ರೀಪಾದ ಟಿ.ಭಾಗವತ್" ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಎಂ.ಜಿ.ಎಂ.ಕಾಲೇಜು, ಉಡುಪಿ, ಕುತ್ಪಾಡಿ ಆನಂದ ಗಾಣಿಗರ ಕುಟುಂಬಸ್ಥರು, ಬಂಧುಗಳು ಮತ್ತು ಸ್ನೇಹಿತರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ - ಬೆಂಗಳೂರು ಇವರ ಸಹಕಾರದೊಂದಿಗೆ ನಡೆಯುವ ಈ ಎರಡೂ ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ಕುತ್ಪಾಡಿ ಆನಂದ ಗಾಣಿಗರ ಹಾಗೂ ಸಾಯಿ ರಾಧಾದ ಶ್ರೀ ಮನೋಹರ ಎಸ್.ಶೆಟ್ಟಿ ಯವರ ಒಡನಾಡಿಗಳು, ಮಿತ್ರರು, ಸಾರ್ವಜನಿಕರು ಭಾಗವಹಿಸ ಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ರಂಗಭೂಮಿ ಸಂಸ್ಥೆಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ವಿನಂತಿಸಿದ್ದಾರೆ .



0 ಕಾಮೆಂಟ್ಗಳು