ವಾಟ್ಸಾಪ್ ಮೂಲಕ ಅಪರಿಚಿತ ಫೈಲ್ಗಳನ್ನು ಡೌನ್ಲೋಡ್ ಮಾಡುವಂತೆ ಪ್ರೇರೇಪಿಸಿ ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡುವ ಸೈಬರ್ ವಂಚಕರ ಜಾಲಕ್ಕೆ ಉಡುಪಿಯ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಆರ್.ಟಿ.ಒ (RTO) ಚಲನ್ ಪಾವತಿಯ ಹೆಸರಿನಲ್ಲಿ ಲಿಂಕ್ ಕಳುಹಿಸಿ ಸುಮಾರು 4.86 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ಅಬ್ದುಲ್ ಹಮೀದ್ ಅವರು ಪಡುಬಿದ್ರಿ ಹೆಜಮಾಡಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಖಾತೆ ಹೊಂದಿದ್ದಾರೆ. ಏಪ್ರಿಲ್ 12 ರಂದು ಬೆಳಿಗ್ಗೆ ಇವರ ಪರಿಚಯಸ್ಥರಾದ ಕುಮಾರ ಸ್ವಾಮಿ ಎಂಬುವವರ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿ ‘R.T.O challan E-Court notification’ ಎಂಬ ಹೆಸರಿನ .apk ಫೈಲ್ ಇತ್ತು. ಇದು ಅಧಿಕೃತ ನೋಟಿಫಿಕೇಶನ್ ಇರಬಹುದೆಂದು ನಂಬಿದ ಹಮೀದ್ ಅವರು ಆ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದಾರೆ.
ಫೈಲ್ ಡೌನ್ಲೋಡ್ ಮಾಡಿದ ಮರುದಿನ, ಅಂದರೆ ಏಪ್ರಿಲ್ 13 ರಂದು ಹಮೀದ್ ಅವರ ಬ್ಯಾಂಕ್ ಖಾತೆಗಳಿಂದ ಹಣ ಕಡಿತಗೊಳ್ಳಲು ಆರಂಭವಾಗಿದೆ. ವಂಚಕರು ಹಂತ ಹಂತವಾಗಿ ಒಟ್ಟು 4,86,137.74/- ರೂಪಾಯಿ (ನಾಲ್ಕು ಲಕ್ಷದ ಎಂಬತ್ತಾರು ಸಾವಿರದ ಒಂದು ನೂರ ಮೂವತ್ತೇಳು ರೂಪಾಯಿ) ಹಣವನ್ನು ಲೂಟಿ ಮಾಡಿದ್ದಾರೆ. ತಮ್ಮ ಖಾತೆಯಿಂದ ಹಣ ಕಡಿತಗೊಂಡಿರುವುದನ್ನು ಗಮನಿಸಿದ ಅಬ್ದುಲ್ ಹಮೀದ್ ಕೂಡಲೇ ಪೊಲೀಸರ ಮೊರೆ ಹೋಗಿದ್ದಾರೆ.
ಈ ಕುರಿತು ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2026 ರಂತೆ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಕಲಂ 66(c), 66(d) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ:
ಪರಿಚಯಸ್ಥರ ಸಂಖ್ಯೆಯಿಂದಲೇ ಸಂದೇಶ ಬಂದಿದ್ದರೂ ಸಹ, ಯಾವುದೇ ಅಪ್ಲಿಕೇಶನ್ ಫೈಲ್ಗಳನ್ನು (.apk) ಅಥವಾ ಸಂಶಯಾಸ್ಪದ ಲಿಂಕ್ಗಳನ್ನು ಡೌನ್ಲೋಡ್ ಮಾಡಬಾರದು. ಸೈಬರ್ ವಂಚಕರು ಮೊಬೈಲ್ ಹ್ಯಾಕ್ ಮಾಡಲು ಇಂತಹ ತಂತ್ರಗಳನ್ನು ಬಳಸುತ್ತಾರೆ. ಇಂತಹ ವಂಚನೆಗೊಳಗಾದಲ್ಲಿ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಲು ಅಥವಾ ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ದೂರು ದಾಖಲಿಸಲು ಪೊಲೀಸ್ ಇಲಾಖೆ ವಿನಂತಿಸಿದೆ.

0 ಕಾಮೆಂಟ್ಗಳು