ಉಡುಪಿ : ಯಕ್ಷಗಾನ ಕಲಾರಂಗವು ಕಳೆದ 26 ವರ್ಷಗಳಿಂದ ನಡೆಸುತ್ತಾ ಬಂದಿರುವ ಯಕ್ಷಗಾನ ಕಲಾವಿದರ ಸಮಾವೇಶವು ಮೇ 31, 2026 ಭಾನುವಾರದಂದು ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಪೂರ್ತಿ ಕಾರ್ಯಕ್ರಮವಾಗಿ ನಡೆಯಲಿದೆ. ಪೂವಾಹ್ನ 9.00 ರಿಂದ ಕಲಾವಿದರಿಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಇಲ್ಲಿನ ವೈದ್ಯರಿಂದ ವೈದ್ಯಕೀಯ ತಪಾಸಣೆ ಆರಂಭವಾಗಲಿದೆ. 10.30 ಗಂಟೆಗೆ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕಲಾಮಂಡಲಮ್ ನಂದಕುಮಾರ್ ಮತ್ತು ತಂಡದವರಿಂದ ‘ಕಲ್ಯಾಣ ಸೌಗಂಧಿಕಂ' ತುಳ್ಳಲ್ ತ್ರಯಮ್ ಪ್ರದರ್ಶನಗೊಳ್ಳಲಿದೆ. 12.00ರಿಂದ ಕಲೆ-ಕಲಾವಿದ-ಪ್ರೇಕ್ಷಕ : ಸಮನ್ವಯ ವಿಷಯದ ಕುರಿತು ಕಲಾವಿದರು ಚರ್ಚೆ ನಡೆಸಲಿದ್ದು, ಅರ್ಥಧಾರಿ, ಪ್ರಸಂಗಕರ್ತ ಪವನ್ ಕಿರಣ್ಕೆರೆ ಸಮನ್ವಯಕಾರರಾಗಿರುತ್ತಾರೆ.
ಅಪರಾಹ್ನ 2.30ರಿಂದ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದ್ದು, ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚಿಸಲಿದ್ದಾರೆ. ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆವಹಿಸಲಿರುವ ಈ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭಾಶಂಸನೆಗೈಯಲಿರುವರು. ಮಾನ್ಯ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕಲಾವಿದರಿಗೆ ಉಡುಗೊರೆಯನ್ನು ವಿತರಿಸಲಿರುವರು. ಉಡುಪಿ ಶಾಸಕ ಶ್ರೀ ಯಶ್ಪಾಲ್ ಸುವರ್ಣ ಗೃಹ ನಿರ್ಮಾಣದ ಉಡುಗೊರೆಯನ್ನು ವಿತರಿಸಲಿರುವರು. ಶಾಸಕರುಗಳಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಕಿರಣ್ ಕುಮಾರ್ ಕೊಡ್ಗಿ, ಶ್ರೀ ಗುರುರಾಜ ಗಂಟಿಹೊಳೆ, ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಶ್ರೀ ಆನಂದ ಸಿ. ಕುಂದರ್, ಶ್ರೀ ಪಣಂಬೂರು ವಾಸದೇವ ಐತಾಳ್, ಶ್ರೀ ಪಿ. ಪುರುಷೋತ್ತಮ ಶೆಟ್ಟಿ, ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಆನಂದ ಪಿ. ಸುವರ್ಣ ಮತ್ತು ಶ್ರೀ ಸಾಧು ಸಾಲಿಯಾನ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ನೆರವು, ಗೃಹನಿರ್ಮಾಣದ ಉಡುಗೊರೆ ವಿತರಿಸಲಾಗುವುದು. ಯಕ್ಷನಿಧಿಯ ಸದಸ್ಯರಾದ ವೃತ್ತಿಮೇಳದ ಸುಮಾರು 1000 ಕಲಾವಿದರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಸಮಾವೇಶದ ಉಡುಗೊರೆ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್ಗಳು