ಯಕ್ಷಗಾನ ಕಲಾವಿದರ 26ನೇಯ ಸಮಾವೇಶ

ಉಡುಪಿಯ ಯಕ್ಷಗಾನ ಕಲಾರಂಗ 25 ವರ್ಷಗಳಿಂದ ನಡೆಸಿಕೊಂಡು ಬಂದ ವೃತ್ತಿನಿರತ ಯಕ್ಷಗಾನ ಕಲಾವಿದರ ಸಮಾವೇಶವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೇ 31, 2026ರಂದು ಜರಗಿತು. ಅಪರಾಹ್ನ ನಡೆದ ಪ್ರಧಾನ ಸಮಾರಂಭದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಯಕ್ಷಗಾನವು ನಮ್ಮ ಸಂಸ್ಕೃತಿಯನ್ನು, ಪುರಾಣ ಕಥೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಅತ್ಯುತ್ತಮ ಜನಪ್ರಿಯ ಕಲಾಪ್ರಕಾರವಾಗಿದೆ. ಬೇರೆ ಯಾವುದೇ ಕಲೆಯ ಪ್ರಸ್ತುತಿಯ ಸಂದರ್ಭದಲ್ಲೂ ಯಕ್ಷಗಾನ ಪ್ರದರ್ಶನದಲ್ಲಿ ಸೇರುವಷ್ಟು ಜನ ಸೇರದಿರುವುದೆ ಇದರ ಮಹತ್ತಿಕೆಯನ್ನು ತಿಳಿಸುತ್ತದೆ ಎಂದು ಹೇಳಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಶುಭಾಶಂಸನಗೈದರು. ಜನಪ್ರತಿನಿಧಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಗೊಳೆ ಸಮಾವೇಶದಲ್ಲಿ ಭಾಗವಹಿಸಿದ್ದರು. ಯಕ್ಷಗಾನ ಪೋಷಕ ಪಣಂಬೂರು ವಾಸುದೇವ ಐತಾಳ್, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ ಶ್ರುತಕೀರ್ತಿ ರಾಜ್ ರಚಿಸಿದ ‘ಯಕ್ಷಗಾನ ಶ್ರೀರಾಮ ಸೂಕ್ತ’ ಪುಸ್ತಕವನ್ನು ಬಿಡುಗಡೆಮಾಡಲಾಯಿತು. ಕೊಂಡದಕುಳಿ ರಾಮಚಂದ್ರ ಹೆಗಡೆಯವರು ತಮ್ಮ ಪೂರ್ಣಚಂದ್ರ ಕಲಾ ಪ್ರತಿಷ್ಠಾನದ ವತಿಯಿಂದ 25,000/- ನಗದು ಪುರಸ್ಕಾರದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ ಮತ್ತು 1,00,000/- ನಗದು ಪುರಸ್ಕಾರದ ‘ಉತ್ತರ ಕನ್ನಡ ಯಕ್ಷಶ್ರೀ’ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗಕ್ಕೆ ಪ್ರದಾನ ಮಾಡಿದರು. ವೇದಿಕೆಯಲ್ಲಿ ಕಲಾವಿದ ಸತೀಶ್ ಪೂಜಾರಿ ನೈನಾಡು ಇವರಿಗೆ ರೂ. 25,000/-ದ ವೈದ್ಯಕೀಯ ನೆರವು ನೀಡಲಾಯಿತು. 20 ಜನ ಕಲಾವಿದರಿಗೆ ತಲಾ 20,000/-ದ ಗೃಹನಿರ್ಮಾಣದ ಉಡುಗೊರೆ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ವಿವಿಧ ಮೇಳದ 800ಕ್ಕೂ ಅಧಿಕ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಿದ್ದು, ಇವರಿಗೆಲ್ಲರಿಗೂ ಉಪಯುಕ್ತ ಉಡುಗೊರೆಯನ್ನು ವಿತರಿಸಲಾಯಿತು.

ಪೂರ್ವಾಹ್ನ 9.00ಗಂಟೆಯಿ೦ದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಡಾ. ಶೈಲಜಾ ಭಟ್ ಮತ್ತು ಡಾ. ರಾಜೇಶ್ ನಾವಡರ ಮಾರ್ಗದರ್ಶನದಲ್ಲಿ ಜರಗಿತು. ಶ್ರೀ ಮಠದ ಪ್ರಬಂಧಕರಾದ ವಾಸುದೇವ ಆಚಾರ್ಯರು ಸಮಾವೇಶವನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಹಾಗೂ ಹಿರಿಯ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈ, ರೆಂಜಾಳ ರಾಮಕೃಷ್ಣ ರಾವ್, ವಿ. ಗಣಪತಿ ಭಟ್ ಉಪಸ್ಥಿತರಿದ್ದರು. ಪೂರ್ವಾಹ್ನ 11.00 ಗಂಟೆಯಿ೦ದ ಕಲಾ ಮಂಡಲಮ್ ನಂದಕುಮಾರ್ ತಂಡದವರಿಂದ ಕಲ್ಯಾಣ ಸೌಗಂಧಿಕಂ ತುಳ್ಳಲ್ ತ್ರಯಮ್ ಪ್ರದರ್ಶನ ಜರಗಿತು. ನಂತರ ಕಲೆ-ಕಲಾವಿದ-ಪ್ರೇಕ್ಷಕ : ಸಮನ್ವಯ ಎಂಬ ವಿಷಯದ ಕುರಿತು ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್, ನೀಲ್ಕೋಡು ಶಂಕರ ಹೆಗಡೆ, ಪ್ರಜ್ವಲ್ ಗುರುವಾಯನಕೆರೆ, ಮಹೇಶ್ ಸಾಣೂರು, ವಾದಿರಾಜ ಕಲ್ಲುರಾಯ, ನಂದೀಶ್ ಶೆಟ್ಟಿ ಬಿಲ್ಲಾಡಿ ತಮ್ಮ ಅನಿಸಿಕೆಯನ್ನು ಸೊಗಸಾಗಿ ಹಂಚಿಕೊಂಡರು. ಪ್ರಸಂಗಕರ್ತ ಪವನ್ ಕಿರಣ್‌ಕೆರಯವರು ಸಮನ್ವಯಕಾರರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು