ಮಣಿಪಾಲ : ಈಶ್ವರನಗರ ವಸತಿ ಪ್ರದೇಶದ ಹೆದ್ದಾರಿ ಪ್ರವೇಶದ್ವಾರದಲ್ಲಿ ವಾಹನಗಳ ವೇಗ ನಿಯಂತ್ರಿಸಿ, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈಶ್ವರನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.), ಮಣಿಪಾಲ ವತಿಯಿಂದ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಅವುಗಳ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ಈಶ್ವರನಗರ ಪ್ರವೇಶದ್ವಾರದ ಸಮೀಪದ ಬಿಗ್ ಬಾಸ್ ಹೋಟೆಲ್ ಬಳಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಶ್ರೀ ಶಾಂಬುಲಿಂಗಯ್ಯ ಎಂ. ಇ. ಅವರು ಬ್ಯಾರಿಕೇಡ್ಗಳನ್ನು ಉದ್ಘಾಟಿಸಿದರು. ಈಶ್ವರನಗರಕ್ಕೆ ಪ್ರವೇಶಿಸುವ ವಾಹನಗಳು ಹಾಗೂ ರಸ್ತೆ ವಿಭಜಕದ ಬಳಿ ಯು-ಟರ್ನ್ ಪಡೆಯುವ ವಾಹನಗಳ ವೇಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಭಜಕದ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಇದರಿಂದ ವಾಹನ ಸವಾರರ ಜತೆಗೆ ಪಾದಚಾರಿಗಳು, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುರಕ್ಷತೆಗೆ ನೆರವಾಗಲಿದೆ ಎಂದು ಸಂಘ ತಿಳಿಸಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶಾಂಬುಲಿಂಗಯ್ಯ ಅವರು, ರಸ್ತೆ ಸುರಕ್ಷತೆ ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ; ಸಾರ್ವಜನಿಕರ ಸಹಕಾರ, ಸಂಚಾರ ನಿಯಮಗಳ ಪಾಲನೆ ಮತ್ತು ಜವಾಬ್ದಾರಿಯುತ ವಾಹನ ಚಾಲನೆಯೂ ಅಷ್ಟೇ ಮುಖ್ಯ ಎಂದರು. ಅಪಘಾತಗಳನ್ನು ತಡೆಗಟ್ಟಲು ವಾಹನ ಸವಾರರು ವೇಗ ನಿಯಂತ್ರಣ, ಸರಿಯಾದ ಪಾರ್ಕಿಂಗ್ ಹಾಗೂ ಸಂಚಾರ ಶಿಸ್ತಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈಶ್ವರನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕೈಗೊಂಡಿರುವ ಕ್ರಮವನ್ನು ಅವರು ಶ್ಲಾಘಿಸಿ, ಈಶ್ವರನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆಗೆ ಮಣಿಪಾಲ ಪೊಲೀಸರು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶ್ರೀ ಹರೀಶ್ ಕಲ್ಮಾಡಿ ಪೊಲೀಸ್ ಅಧಿಕಾರಿಗಳನ್ನು ಸ್ವಾಗತಿಸಿ, ನಿವಾಸಿಗಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಮಣಿಪಾಲ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಡೈರಿ ರಸ್ತೆಯಲ್ಲಿ ಅಸಮರ್ಪಕ ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಯತ್ತ ಪೊಲೀಸ್ ಅಧಿಕಾರಿಗಳ ಗಮನ ಸೆಳೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಪ್ರೊ. ಬಾಲಚಂದ್ರ ಎಂ. ಅವರು ಶ್ರೀ ಶಾಂಬುಲಿಂಗಯ್ಯ ಅವರನ್ನು ಪುಷ್ಪಗುಚ್ಛ ನೀಡಿ ಗೌರವಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ರಾಜವರ್ಮ ಅರಿಗ ಅವರು ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ಯಾರಿಕೇಡ್ ಅಳವಡಿಕೆ ಯೋಜನೆಯನ್ನು ಈಶ್ವರನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಗ್ ಬಾಸ್ ಹೋಟೆಲ್ ಜಂಟಿಯಾಗಿ ಕೈಗೊಂಡಿದ್ದು, ಯೋಜನೆಯ ಒಟ್ಟು ವೆಚ್ಚವನ್ನು ಎರಡೂ ಸಂಸ್ಥೆಗಳು ತಲಾ ಶೇ. 50ರಷ್ಟು ಭರಿಸಿವೆ. ರಸ್ತೆ ಸುರಕ್ಷತೆ, ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳನ್ನು ಸಂಘವು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಬ್ಯಾರಿಕೇಡ್ ಅಳವಡಿಕೆ ಅದರ ಮತ್ತೊಂದು ಸಮಾಜಮುಖಿ ಉಪಕ್ರಮವಾಗಿದೆ.
